

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆಯಲ್ಲಿ ಉಂಟಾಗಿರುವ ಸಮಸ್ಯೆಯಿಂದಾಗಿ ನಡೆದ ಹಿಂಸಾಚಾರದಿಂದ ಬೆಂಗಳೂರಿನಲ್ಲಿರುವ ಹಲವು ತಮಿಳಿಗರು ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳಲು ತಮ್ಮ ಗುರತನ್ನು ಮುಚ್ಚಿಟ್ಟು ಬದುಕುತ್ತಿದ್ದಾರೆ. ತಮಿಳುನಾಡಿನ ಹಲವು ಹೆಸರಿದ್ದ ಅಂಗಡಿ, ಹೊಟೇಲ್ ಗಳು ಹೆಸರನ್ನು ಬದಲಾಯಿಸಿಕೊಳ್ಳುವಂತ ವಾತಾರವರಣ ನಿರ್ಮಾಣವಾಗಿದೆ.
ಬೆಂಗಳೂರಿನಲ್ಲಿ ಅಂಬೂರ್ ದಮ್ ಬಿರಿಯಾನಿ ಹೊಟೇಲ್ ಒಟ್ಟು 5 ಬ್ರಾಂಚ್ ಹೊಂದಿದೆ.ಕಾವೇರಿ ಗಲಾಟೆ ನಡೆದ ದಿನದಂದು ಬನಶಂಕರಿ ಮತ್ತು ಮೈಸೂರು ರಸ್ತೆಯಲ್ಲಿರುವ ಅಂಬೂರ್ ದಮ್ ಬಿರಿಯಾನಿ ಹೊಟೇಲ್ ಮೇಲೆ ದಾಳಿ ನಡೆಸಿದ್ದರಿಂದ ಈ ಎರಡು ಶಾಖೆಗಳು ಸಂಪೂರ್ಣ ನಾಶವಾಗಿವೆ. ಹೀಗಾಗಿ ಅಂಬೂರ್ ದಮ್ ಬಿರಿಯಾನಿ ಬದಲು ಕರ್ನಾಟಕ ಬಿರಿಯಾನಿ ಎಂದ ಹೆಸರು ಬದಲಿಸಿರುವುದಾಗಿ ಹೊಟೇಲ್ ಮಾಲೀಕ ಆರ್ ರಾಜು ತಿಳಿಸಿದ್ದಾರೆ.
ಅಂದು ನಡೆದ ಗಲಭೆಯಿಂದಾಗಿ ಸುಮಾರು 9 ಲಕ್ಷ ರು ಹಣ ನಷ್ಟವಾಗಿದ್ದು, 10 ಕೆಲಸಗಾರರು ಕೆಲಸ ಬಿಟ್ಟು, ತಮಿಳುನಾಡಿನ ವೆಲ್ಲೂರಿಗೆ ತೆರಳಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕಿಡಿಗೇಡಿಗಳು ಮತ್ತೆ ತಮ್ಮನ್ನು ಟಾರ್ಗೆಟ್ ಮಾಡಬಹುದೆಂಬ ಭಯದಿಂದಾಗಿ ಅಂಬೂರ್ ಬಿರಿಯಾನಿ ಹೆಸರನ್ನು ಕರ್ನಾಟಕ ಬಿರಿಯಾನಿ ಎಂದು ಬದಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಅಂಬೂರ್ ಬಿರಿಯಾನಿ ಎಂದ ಹೆಸರಿದ್ದಾಗ ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಆದರೆ ಹೆಸರು ಬದಲಾವಣೆ ಮಾಡಿದ ಮೇಲೆ ವ್ಯಾಪಾರ ಕಡಿಮೆಯಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ತಮಿಳುನಾಡು ನೋಂದಣಿ ಇರುವ ವಾಹನಗಳು ರಸ್ತೆಯಲ್ಲಿ ಕಾಣುವುದು ಅಪರೂಪವಾಗಿದೆ. ಕಾವೇರಿ ಗಲಾಟೆ ನಡೆದ ಮೇಲೆ ನಾನು ನನ್ನ ಬೈಕ್ ಅನ್ನು ಹೊರಗಡೆಗೆ ತೆಗೆದೇ ಇರಲಿಲ್ಲ, ಆದರೆ ಇತ್ತೀಚೆಗೆ ಪರಿಸ್ಥಿತಿ ಶಾಂತವಾಗಿರುವುದರಿಂದ ತಮಿಳುನಾಡು ರಿಜಿಸ್ಟ್ರೇಷನ್ ಇರುವ ಬೈಕ್ ನಲ್ಲಿ ಓಡಾಡುತ್ತಿರುವುದಾಗಿ ಕೋರಮಂಗಲ ನಿವಾಸಿ ಸದ್ದಾಮ್ ತಿಳಿಸಿದ್ದಾರೆ.
ಜೊತೆಗೆ ಹಲವು ಥಿಯೇಟರ್ ಗಳಲ್ಲಿ ತಮಿಳು ಚಿತ್ರ ಪ್ರದರ್ಶನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಶೇಷಾದ್ರಿಪುರಂ ನಲ್ಲಿರುವ ವಟರಾಜ ಥಿಯೇಟರ್ ಸೇರಿದಂತೆ ಒಟ್ಟು ನಗರದ 10 ಥಿಯೇಟರ್ ಗಳಲ್ಲಿ ಕೇವಲ ತಮಿಳು ಚಿತ್ರ ಮಾತ್ರ ಪ್ರದರ್ಶಿಸಲಾಗುತ್ತಿತ್ತು. ಆದರೆ ಕಾವೇರಿ ಗಲಾಟೆ ನಂತರ ಕೇವಲ ಕನ್ನಡ ಮತ್ತು ಇಂಗ್ಲೀಷ್ ಚಿತ್ರಗಳ ಪ್ರದರ್ಶನ ಮಾತ್ರ ಕಾಣುತ್ತಿದೆ.
ತಮಿಳುನಾಡು ಮೂಲದ ಹಲವು ಕಂಪನಿಗಳು, ಗಲಭೆಕೋರರಿಂದ ರಕ್ಷಿಸಿಕೊಳ್ಳಲು ತಮ್ಮ ಕಚೇರಿಯ ಕಟ್ಟಡಗಳ ಮುಂದೆ ಕನ್ನಡ ಬಾವುಟ ಹಾಕಿರುವುದು ಕಂಡು ಬರುತ್ತದೆ. ಯಾರಾದರೂ ಕಂಪನಿಯ ಮುಂದಿರುವ ಗಾಜಿಗೆ ಕಲ್ಲು ಹೊಡೆದರೇ ಅದಕ್ಕೆ ಲಕ್ಷಾಂತರ ರು. ವೆಚ್ಚ ತಗಲುತ್ತದೆ. ಹಾಗಾಗಿ ಇದರಿಂದ ತಪ್ಪಿಸಿಕೊಳ್ಳಲು ಕರ್ನಾಟಕ ಬಾವುಟವನ್ನು ಬಳಸಿಕೊಳ್ಳುತ್ತಿದ್ದಾರೆ. ಹಲವು ಆಟೋಗಳ ಮೇಲಿದ್ದ ತಮಿಳು ನಟರುಗಳ ಪೋಸ್ಟರ್ ಗಳನ್ನು ಚಾಲಕರು ಕಿತ್ತು ಹಾಕಿದ್ದಾರೆ.
Advertisement