ಬೆಂಗಳೂರು: ಜೋಡಿ ಕೊಲೆಗೆ ಕಾರಣವಾಯ್ತು ಅಣ್ಣನ ಮೇಲಿನ ಅಸೂಯೆ, ಹೊಟ್ಟೆಕಿಚ್ಚು

ಸಂತನಗರದಲ್ಲಿ ನಡೆದಿದ್ದ ಅತ್ತೆ–ಸೊಸೆ ಕೊಲೆ ಪ್ರಕರಣವನ್ನು ಭೇದಿಸಿರುವ ಕೇಂದ್ರ ವಿಭಾಗದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸಂತೋಷಿ ಬಾಯಿ ಮತ್ತು ಲತಾ
ಸಂತೋಷಿ ಬಾಯಿ ಮತ್ತು ಲತಾ

ಬೆಂಗಳೂರು:ವಸಂತನಗರದಲ್ಲಿ ನಡೆದಿದ್ದ ಅತ್ತೆ–ಸೊಸೆ  ಕೊಲೆ ಪ್ರಕರಣವನ್ನು ಭೇದಿಸಿರುವ ಕೇಂದ್ರ ವಿಭಾಗದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಸಂತೋಷಿಬಾಯಿ (60) ಹಾಗೂ ಅವರ ಸೊಸೆ ಲತಾ (39) ಎಂಬುವರ ಹತ್ಯೆ ನಡೆದಿತ್ತು. ಈ ಸಂಬಂಧ ಟಿ.ಸಿ.ಪಾಳ್ಯ ಮುಖ್ಯರಸ್ತೆಯ ಮನೀಶ್ (29), ಆತನ ಭಾಮೈದ ದೇವರಾಂ (24) ಹಾಗೂ ರಾಮಮೂರ್ತಿನಗರದ ಮಹೇಂದರ್ ಸಿಂಗ್ (29) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರೆಲ್ಲ ರಾಜಸ್ತಾನ ಮೂಲದವರು. ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿರುವ ಇವರು, ಪಾನ್‌ ಬ್ರೋಕರ್ ಕೆಲಸ ಮಾಡುತ್ತಿದ್ದರು.ಸಂತೋಷಿಬಾಯಿ ಅವರ ಪತಿ ಸಂಪತ್‌ರಾಜ್ ದೇವ್ರಾ ಹಾಗೂ ಮಗ ದಿನೇಶ್ (ಲತಾ ಪತಿ) ಅವರು ರಾಸಾಯನಿಕ ವಸ್ತುಗಳ ಮಾರಾಟ ಮಳಿಗೆ ನಡೆಸುತ್ತಾರೆ. ಜತೆಗೆ ಫೈನಾನ್ಸ್‌ ವ್ಯವಹಾರ ಕೂಡ ಮಾಡುವ ಇವರು, ಮನೆಯಲ್ಲೇ ಚಿನ್ನಾಭರಣ ಗಿರವಿ ಇಡಿಸಿಕೊಂಡು ಸಾಲ ಕೊಡುತ್ತಾರೆ. ಸಂಪತ್‌ರಾಜ್ ಅವರಿಗೆ ಆರು ವರ್ಷಗಳ ಹಿಂದೆ ಮೋಹನ್ ಲಾಲ್ ಎಂಬಾತನ ಪರಿಚಯವಾಗಿತ್ತು. ಮೋಹನ್ ಲಾಲ್ ಮತ್ತು ಆತನ ಸಹೋದರ ಮನೀಶ್ ಇಬ್ಬರು ಒಟ್ಟಿಗೆ ಪಾನ್ ಬ್ರೋಕರ್ ಕೆಲಸಮಾಡುತ್ತಿದ್ದರು. ಸಂಪತ್ ರಾಜ್ ಮನೆಗೆ ಮನೀಶ್ ಆಗಾಗ ಹೋಗಿ ಬರುತ್ತಿದ್ದ. ಈ ನಡುವೆ ಮೋಹನ್ ಲಾಲ್ ಮತ್ತು ಮನೀಶ್ ನಡುವ ವೈಷಮ್ಯ ಉಂಟಾಗಿ ಮನೀಶ್ ಅಣ್ಣನ ವ್ಯವಹಾರದಿಂದ ಹೊರಗುಳಿದ. ನಂತರ ಸಂಪತ್ ರಾಜ್ ಪುತ್ರ ದಿನೇಶ್ ಜೊತೆ ಮನೀಶ್ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ.

ಹಣಕಾಸಿನ ಸಮಸ್ಯೆ ಇದ್ದ ಕಾರಣ ಮನೀಶ್ ಗ್ರಾಹಕರಿಂದ ಹೆಚ್ಚು ಒಡವೆಗಳನ್ನು ಗಿರವಿ ಇಡಿಸಿಕೊಳ್ಳುತ್ತಿರಲಿಲ್ಲ. ಆದರೆ, ದಿನೇಶ್ ಪರಿಚಯವಾದ ಬಳಿಕ ಆತ ಕಮಿಷನ್ ವ್ಯವಹಾರಕ್ಕೆ ಇಳಿದಿದ್ದ. ಅಂದರೆ, ಗ್ರಾಹಕರು ಎಷ್ಟೇ ಆಭರಣ ಗಿರವಿ ಇಟ್ಟರೂ, ಅವುಗಳನ್ನು ತಂದು ದಿನೇಶ್ ಗೆ ತಂದು ಕೊಡುತ್ತಿದ್ದ. ಈ ಲೇವಾದೇವಿ ವ್ಯವಹಾರವನ್ನು ದಿನೇಶ್ ತಾಯಿ ಸಂತೋಷಿಬಾಯಿ ನೋಡಿಕೊಳ್ಳುತ್ತಿದ್ದರು.  

ಇತ್ತೀಚೆಗೆ ಒಡವೆಗಳನ್ನು ದಿನೇಶ್ ಬಳಿ ಗಿರವಿ ಇಟ್ಟು ಹಣ ಪಡೆದುಕೊಂಡಿದ್ದ ಆತ, ಆ  ಹಣವನ್ನು ಗ್ರಾಹಕರಿಗೆ ತಲುಪಿಸದೆ ಸ್ವಂತಕ್ಕೆ ಬಳಸಿಕೊಂಡಿದ್ದ. ಹಲವು ದಿನ ಕಳೆದರೂ ಹಣ ಕೈಸೇರದಿದ್ದಾಗ ಸಿಟ್ಟಿಗೆದ್ದ ಗ್ರಾಹಕರು, ತಮ್ಮ ಒಡವೆಗಳನ್ನು ವಾಪಸ್ ಕೊಡುವಂತೆ ಆತನ ಹಿಂದೆ ಬಿದ್ದಿದ್ದರು. ಇದರಿಂದ ದಿಕ್ಕು ತೋಚದಂತಾದ ಮನೀಶ್, ದಿನೇಶ್  ಮನೆಯಲ್ಲಿ ಆಭರಣ ದೋಚಲು ಸಂಚು ರೂಪಿಸಿದ್ದ. ಜೂಜು ದಂಧೆಯಲ್ಲಿ ಹಣವನ್ನು ಕಳೆದುಕೊಂಡಿದ್ದ ಮನೀಶ್, ದಿನೇಶ್ ಮನೆಯಲ್ಲಿದ್ದ ಹಣ ಹಾಗೂ ಒಡವೆ ನೋಡಿ ಅಸೂಯೆ ಪಟ್ಟುಕೊಳ್ಳುತ್ತಿದ್ದ. ಈಗಿರುವ ಮನೆಯ ಹಿಂದೆ ಮತ್ತೊಂದು ಮನೆ ಕಟ್ಟಿಸುತ್ತಿದ್ ದಿನೇಶ್ ಬಳಿ ಹೆಚ್ಚಿನ ಹಣ ಹಾಗೂ ಚಿನ್ನಾಭರಣ ಇದೆಯೆಂದು ಮನೀಶ್ ನಂಬಿದ್ದ.

ಸ್ನೇಹಿತ ಮಹೇಂದರ್‌ನನ್ನು ಕರೆದುಕೊಂಡು ಸೋಮವಾರ ಬೆಳಿಗ್ಗೆ ವಸಂತನಗರಕ್ಕೆ ಬಂದಿದ್ದ ಆತ, ‘ತಾನು ಗಿರವಿ ಇಟ್ಟಿರುವ ಅಷ್ಟೂ ಒಡವೆಗಳನ್ನು ಕೊಡುವಂತೆ ಸಂತೋಷಿ ಬಾಯಿ ಜತೆ ಜಗಳ ತೆಗೆದಿದ್ದ ಆತ, ಆಭರಣ ನೀಡಲು ಒಪ್ಪದಿದ್ದಾಗ ಚಾಕುವಿನಿಂದ ಅವರ ಕುತ್ತಿಗೆ ಸೀಳಿದ್ದ. ಈ ವೇಳೆ ತಮ್ಮ ಪತಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದಳು ಅತ್ತೆಯ ಚೀರಾಟ ಕೇಳಿ ಕೆಳಗೆ ಇಳಿದು ಬಂದಿದ್ದ ಲತಾ ಅವರನ್ನು ಆರೋಪಿ ಇರಿದು ಕೊಂದು ಪರಾರಿಯಾಗಿದ್ದ. ನಂತರ ಮೂರು ತಂಡಗಳನ್ನು ರಚಿಸಿದ್ದ ಪೊಲೀಸರು ಆರೋಪಿಗಳನ್ನು 36 ಗಂಟೆಗಳಲ್ಲೇ ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com