ಬೆಂಗಳೂರು: ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಸಾದನೆ ಮಾಡಿರುವ ಕರ್ನಾಟಕ , ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ, ಹೂಡಿಕೆಗಳು ಹಾಗೂ ಉದ್ಯೋಗ ಸೃಷ್ಟಿ ಮಾಡುವ ಮೂಲಕ ದೇಶದ ಗಮನ ಸೆಳೆದಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ಹೇಳಿದ್ದಾರೆ.
ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಿಐಐ ಸಹಯೋಗದಲ್ಲಿ ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಏರ್ಪಡಿಸಿದ್ದ ಮೇಕ್ ಇನ್ ಕರ್ನಾಟಕ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತ ಶೀಘ್ರವಾದ ಬೆಳವಣಿಗೆಗಾಗಿ ಕಾದು ನಿಂತಿದೆ. ಹೀಗಾಗಿ ಜನಪ್ರತಿನಿಧಿಗಳು ಜಾರಿಗೆ ತರುವ ನೀತಿ ನಿಯಮಗಳು ಅದಕ್ಕೆ ಪೂರಕವಾಗಿರಬೇಕು ಎಂದು ಅಭಿಪ್ರಾಯ ಪಟ್ಟರು. ಬಡತನ ಹೋಗಲಾಡಿಸಲು ವೇಗವಾಗಿ ದೇಶ ಅಭಿವೃದ್ಧಿಯಾಗಬೇಕಿದೆ. ಹೀಗಾಗಿ ತಾಳ್ಮೆಯಿಲ್ಲದ ಮಂದಿ ನಿಯಮ ರೂಪಿಸುವವರ ಮೇಲೆ ಒತ್ತಡ ಹೇರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಉತ್ಪಾದನಾ ಕ್ಷೇತ್ರದ ಪ್ರಗತಿಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ರಿಯಾಯಿತಿ ಹಾಗೂ ಉತ್ತೇಜನಗಳನ್ನು 2025 ರವರೆಗೂ ಮುಂದುವರಿಸಬೇಕು ಎಂದು ಹೇಳಿದ್ದಾರೆ.
ದೇಶದ ಒಟ್ಟಾರೆ ಬೆಳವಣಿಗೆಯಲ್ಲಿ ಉತ್ಪಾದನ ಕ್ಷೇತ್ರದ ಕೊಡುಗೆ ಹೆಚ್ಚಾಗಬೇಕಿದ್ದು, 2025 ರ ವೇಳೆಗೆ ಶೇ.25 ರಷ್ಟು ಹೆಚ್ಚಾಗಬೇಕೆಂದು ದೇಶ ಬಯಸಿದೆ, ಹೀಗಾದಿ ವಿಶೇಷ ಆರ್ಥಿಕ ವಲಯಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕೆಂದು ಹೇಳಿದ್ದಾರೆ.
ಸಾರ್ವಜನಿಕ ಕ್ಷೇತ್ರದ ಪ್ರಯೋಗಾಲಯಗಳನ್ನು ಉದ್ಯಮ ಕ್ಷೇತ್ರಕ್ಕೆ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಬೇಕಿದೆ, ಅದಕ್ಕಾಗಿ ಸಹಕಾರ ಬೇಕು ನವ್ಯೋದ್ಯಮಗಳಿಗೆ ಪೂರಕವಾದ ಪ್ರಯೋಗಾಲಯಗಳನ್ನು ಕೇಂದ್ರ ನಿರ್ಮನಿಸಬೇಕಿದೆ. ಖಾಸಗಿ ಹಾಗೂ ಸರ್ಕಾರಿ ವಲಯಗಳ ಜಂಟು ಸಹಭಾಗಿತ್ವದಲ್ಲಿ ಇದನ್ನು ಮಾಡಬೇಕಿದೆ ಎಂದು ಸಿಎಂ ತಿಳಿಸಿದ್ದಾರೆ.
Advertisement