ಬೆಂಗಳೂರು: ನಗರದ ಹೊರವಲಯದ ರಾಜರಾಜೇಶ್ವರಿ ಡೆಂಟಲ್ ಕಾಲೇಜು ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೈಸೂರು ಲೋಕಾಯುಕ್ತ ಎಸ್ ಪಿ ರವಿಕುಮಾರ್ ದುರ್ಮರಣಕ್ಕೀಡಾಗಿದ್ದಾರೆ. ಅಪಘಾತದಲ್ಲಿ ಎಸ್ ಪಿ ರವಿ ಕುಮಾರ್ ಹಾಗೂ ಚಾಲಕ ಕಿರಣ್ ಕುಮಾರ್ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ 10 ಚಕ್ರದ ಲಾರಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಡಿವೈಡರ್ ದಾಟಿ , ರವಿಕುಮಾರ್ ಪ್ರಯಾಣಿಸುತ್ತಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಕುಂಬಳಗೋಡು ಪೊಲೀಸರು ರವಿ ಕುಮಾರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಅಷ್ಟರಲ್ಲಾಗಲೇ ರವಿಕುಮಾರ್ ಸಾವನ್ನಪ್ಪಿದ್ದರು.
ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಲಾರಿ ಚಾಲಕ ಪರಾರಿಯಾಗಿದ್ದಾನೆ. ರವಿ ಕುಮಾರ್ ಪತ್ನಿ ಅನಿತಾ 8 ದಿನಗಳ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕುಂಬಳಗೋಡುಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಯಾಗುವ ಹಂಬಲದಿಂದ ಕೆಪಿಎಸ್ಸಿ ಗೆಜೆಟೆಡ್ ಪರೀತ್ರೆ ಬರಂದಿದ್ದ ರವಿಕುಮಾರ್ 2008 ರಲ್ಲಿ ಡಿವೈಎಸ್ ಪಿ ಆಗಿ ಪೊಲೀಸ್ ಇಲಾಕೆ ಸೇರಿದ್ದರು.
ಎಸಿಪಿ ಆಗಿ ಬೆಂಗಳೂರು, ಮಂಗಳೂರು ಹಾಗೂ ಬೆಳಗಾವಿಯಲ್ಲಿ ಕೆಲಸ ಮಾಡಿದ್ದರು. ಬಡ್ತಿ ಪಡೆದ ಬಳಿಕ ಲೋಕಾಯುಕ್ತಕ್ಕೆ ನಿಯೋಜನೆಗೊಂಡಿದ್ದ ರವಿಕುಮಾರ್ ಕಳೆದ ಒಂದೂವರೆ ವರ್ಷದಿಂದ ಮೈಸೂರಿನ ಎಸ್ ಪಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
Advertisement