ಬೆಂಗಳೂರು: ಜನವರಿ 15 ರಿಂದ ಎಚ್ ಎ ಎಲ್ ನ 100 ಅಡಿ ರಸ್ತೆಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ ಬೆಂಗಳೂರು ಒಪನ್ ಸ್ಟ್ರೀಟ್ ಫೆಸ್ಟ್ ಗೆ ಹೈಕೋರ್ಟ್ ಅನುಮತಿ ನೀಡಲು ನಿರಾಕರಿಸಿದೆ.
ಕಾರ್ಯಕ್ರಮ ಆಯೋಜಿಸುವುದನ್ನು ವಿರೋಧಿಸಿ ಇಂದಿರಾನಗರ ನಿವಾಸಿಗಳು ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಸುಬ್ರತೋ ಕಮಲ್ ಮುಖರ್ಜಿ ಮತ್ತು ಆರ್ ಬಿ ಬೂದಿಹಾಳ್ ನೇತೃತ್ವದ ಪೀಠ ಅಂಥಹ ಯಾವುದೇ ಕಾರ್ಯಕ್ರಮವನ್ನು ಆಯೋಜಿಸದಂತೆ ಸೂಚಿಸಿದೆ.
ಈ ಸಂಬಂಧ ನ್ಯಾಯಾಲಯದಲ್ಲಿ ಉತ್ತರಿಸಿದ ಶಾಂತಿ ನಗರ ಶಾಸಕ ಎನ್ ಎ ಹ್ಯಾರಿಸ್, ಬೆಂಗಳೂರು ಒಪನ್ ಸ್ಟ್ರೀಟ್ ಫೆಸ್ಟ್ ಆಯೋಜಿಸುವ ಸಂಬಂಧ ಪ್ರಸ್ತಾವನೆ ಮಾಡಲಾಗಿತ್ತು. ಅದಕ್ಕೆ ವಿರೋಧ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮ ಆಯೋಜಿಸುವ ವಿಚಾರವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಹೇಳಿದ್ದಾರೆ.
ಕಾರ್ಯಕ್ರಮ ಆಯೋಜಿಸುವುದನ್ನು ವಿರೋಧಿಸಿ ನಿವೃತ್ತ ಡಿಜಿಪಿ ಸಿ ದಿನಕರ್ ಸೇರಿದಂತೆ ಹಲವು ಸ್ಥಳೀಯರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಆಯೋಜಿಸುವ ಕಾರ್ಯಕ್ರಮದಿಂದ ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಪ್ರಯಾಣಿಕರಿಗೆ, ಪಾದಚಾರಿಗಳಿಗೆ, ವಾಹನ ಸವಾರರಿಗೆ ಅನಾನುಕೂಲವಾಗುತ್ತದೆ. ಇಂಥಹ ಫೆಸ್ಟ್ ಗಳು ನಗರದ ರಸ್ತೆಗಳಿಗೆ ಸರಿಹೊಂದುವುದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
Advertisement