ಉತ್ತರ ಬೆಂಗಳೂರಿನತ್ತ ಬಿಬಿಎಂಪಿ ತೆರವು ಕಾರ್ಯಾಚರಣೆ, ವೈಟ್‌ಹೌಸ್‌ ಕಾಂಪೌಂಡ್‌ ನೆಲಸಮ

ಸುಮಾರು ಒಂದು ತಿಂಗಳ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ರಾಜಕಾಲುವೆ ಒತ್ತುವರಿ ತೆರವು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸುಮಾರು ಒಂದು ತಿಂಗಳ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಉತ್ತರ ಬೆಂಗಳೂರಿನತ್ತ ಮುಖ ಮಾಡಿದ್ದು, ಬುಧವಾರ ಹೆಬ್ಬಾಳ, ಯಲಹಂಕ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಿದೆ.
ಇಂದು ಬೆಳಗ್ಗೆ ಆರ್‌ಟಿ ನಗರ ದಿಣ್ಣೂರು ಮುಖ್ಯರಸ್ತೆಯಲ್ಲಿರುವ ವೈಟ್‌ಹೌಸ್‌ಗೆ ಸೇರಿದ ಸುಮಾರು ಒಂಭತ್ತೂವರೆ ಗುಂಟೆ ಜಾಗದಲ್ಲಿ ನಿರ್ಮಾಣಗೊಂಡಿದ್ದ ಕಾಂಪೌಂಡ್‌ನ್ನು ಬಿಬಿಎಂಪಿ ನೆಲಸಮಗೊಳಿಸಿದೆ. ವೈಟ್‌ಹೌಸ್ ಕಟ್ಟಡ ಕಟ್ಟುವ ಸಮಯದಲ್ಲೇ ಅದರ ಮಾಲೀಕರು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್‌ನ್ನು ನಿರ್ಮಿಸಿದ್ದರು.
ಬಫರ್ ಜೋನ್ ವಲಯವನ್ನು ಬಿಡದೆ ಕಾಂಪೌಂಡನ್ನು ನಿರ್ಮಿಸಲಾಗಿತ್ತು. ಇದರಿಂದ ಈ ಭಾಗದಲ್ಲಿ ರಾಜಕಾಲುವೆ ಇಲ್ಲದಂತಾಗಿದ್ದು, ಮಳೆ ಬಂದಾಗ ನೀರು ಸರಾಗವಾಗಿ ಹರಿಯದೆ ತೊಂದರೆ ಎದುರಾಗಿತ್ತು. ಇಂದು ಸಂಜೆಯೊಳಗೆ ಕಾಂಪೌಂಡ್‌ನ್ನು ತೆರವುಗೊಳಿಸುವ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ. ನಂತರ ಪಟೇಲ್ ಇನ್ ಕ್ಲಬ್‌ನಲ್ಲಿ ಅಕ್ರಮವಾಗಿ ಕಟ್ಟಿಕೊಳ್ಳಲಾಗಿರುವ ಅಡುಗೆ ಮನೆ, ಸಭಾಂಗಣಗಳನ್ನು ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಲಹಂಕ ವಲಯದ ಅಟ್ಟೂರು ವಾರ್ಡ್‌ನ ಗ್ರಾಮದ ಅಟ್ಟೂರು ಕೆರೆ ಕೋಡಿ ಸಮೀಪ 2,300 ಮೀಟರ್ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ 18 ಖಾಲಿ ಜಾಗಗಳನ್ನು ಕೂಡ ಬಿಬಿಎಂಪಿ ಕಾರ್ಯಾಚರಣೆ ಪಡೆ ತೆರವುಗೊಳಿಸಿ ತನ್ನ ವಶಕ್ಕೆ ತೆಗೆದುಕೊಂಡಿದೆ.
18 ಖಾಲಿ ಜಾಗಗಳ ಪೈಕಿ 4 ನಿವೇಶನಗಳ ಮಾಲೀಕರು ನಿವೇಶನದ ಸುರಕ್ಷತೆಗಾಗಿ ಕಾಂಪೌಂಡ್‌ಗಳನ್ನು ನಿರ್ಮಿಸಿಕೊಂಡಿದ್ದರು. ಈ ಕಾಂಪೌಂಡ್‌ಗಳನ್ನು ಇಂದು ತೆರವುಗೊಳಿಸಲಾಗುತ್ತಿದ್ದು, ನಾಳೆ ಸಂಜೆಯವರೆಗೂ ಕಾರ್ಯಾಚರಣೆ ಮುಂದುವರೆಯಲಿದೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರು ವಾರ್ಡ್‌ನ ಕೋಗಿಲು ಗ್ರಾಮದಲ್ಲಿ 2,100 ಮೀಟರ್ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ 40 ಖಾಲಿ ಜಾಗಗಳನ್ನು ತೆರವುಗೊಳಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com