ರಾಜ್ಯಾದ್ಯಂತ ಚುರುಕುಗೊಂಡ ಮುಂಗಾರು: ರೈತರ ಮೊಗದಲ್ಲಿ ಮಂದಹಾಸ

ಕಳೆದ 45 ದಿನಗಳಿಂದ ಕ್ಷೀಣಗೊಂಡಿದ್ದ ಮುಂಗಾರು ರಾಜ್ಯದಲ್ಲಿ ಚುರುಕುಗೊಂಡಿದೆ. ಕಳೆದ ಮೂರು ದಿನಗಳಿಂದ ರಾಜ್ಯದ ಹಲವೆಡೆ ಉತ್ತಮ ...
ಭಾರೀ ಮಳೆಯಿಂದಾಗಿ ಬೆಳಗಾವಿಯಲ್ಲಿ ಕೊಚ್ಚಿಹೋದ ರಸ್ತೆ
ಭಾರೀ ಮಳೆಯಿಂದಾಗಿ ಬೆಳಗಾವಿಯಲ್ಲಿ ಕೊಚ್ಚಿಹೋದ ರಸ್ತೆ
ಬೆಂಗಳೂರು/ಮೈಸೂರು: ಕಳೆದ 45 ದಿನಗಳಿಂದ ಕ್ಷೀಣಗೊಂಡಿದ್ದ ಮುಂಗಾರು ರಾಜ್ಯದಲ್ಲಿ ಚುರುಕುಗೊಂಡಿದೆ. ಕಳೆದ ಮೂರು ದಿನಗಳಿಂದ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಮಂಗಳವಾರ ಸುರಿದ ಭಾರೀ ಮಳೆಗೆ ಬೆಳಗಾವಿಯ ರಾಮದುರ್ಗದಲ್ಲಿ ಮನೆಯೊಂದು ಕುಸಿದು ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. 
ಕೊಡಗಿನಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿಯ ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಉತ್ತರ ಕನ್ನಡದ ಜೋಯಿಡಾ ತಾಲೂಕಿನ ಛಂದೇವಾಡಿಯಲ್ಲಿ ನದಿಯ ಹರಿವಿನಲ್ಲಿ ಏರಿಕೆಯಾದ್ದರಿಂದ 50 ಶಾಲಾ ಮಕ್ಕಳು ನದಿ ದಾಟಲಾಗದೇ ಮತ್ತೊಂದು ದಂಡೆಯ ಮೇಲೆ ಸಿಲುಕಿಕೊಂಡಿದ್ದ ಮಕ್ಕಳನ್ನು  ಗ್ರಾಮಸ್ಥರು ರಕ್ಷಿಸಿದರು.
ಬುಧವಾರ ಬೆಳಗಾವಿಯಲ್ಲಿ 286.7 ಮಿಮಿ ಮಳೆಯಾಗಿದೆ, ಈ ವರ್ಷದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆ ಶಿವಮೊಗ್ಗದಲ್ಲಾಗಿದೆ, 389.8 ಮಿಮಿ ಮಳೆಯಾಗಿದ್ದು, ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ  ಮರಗಳು ಧರೆಗುಳಿದ ಪರಿಣಾಮ ಸಂಚಾರ ಅಸ್ತವ್ಯಸ್ತ ಗೊಂಡಿತ್ತು.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ನಲ್ಲಿ ಭೂ ಕುಸಿತ ಉಂಟಾದ ಪರಿಣಾಮ ಸುಮಾರು 2 ಗಂಟೆಗಳ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು.
ವೈನಾಡಿನಲ್ಲಿ ಭಾರೀ ಮಳೆಯಾಗುತ್ತಿರು ಕಾರಣ, ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. 7,600 ಕ್ಯೂಸೆಕ್ಸ್ ಒಳಹರಿವು ಹೆಚ್ಚಿದೆ. ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ 33.62 ಮಿಮೀ ಮಳೆಯಾಗಿದೆ. ಹೇಮಾವತಿ ನದಿಯ ಒಳಹರಿವು ಕೂಡ ಹೆಚ್ಚಾಗಿದೆ. 5,250 ಕ್ಯೂಸೆಕ್ಸ್ ಇದ್ದ ಒಳ ಹರಿವು 10 ಸಾವಿರ ಕ್ಯೂಸೆಕ್ಸ್ ಗೆ ಏರಿದೆ.
ಶುಕ್ರವಾರದವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದೆ. ದಕ್ಷಿಣ ಒಳನಾಡ, ಮಲೆನಾಡು  ಸೇರಿದಂತೆ ಕರಾವಳಿ ತೀರದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.
ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಕಳೆದ 36 ಗಂಟೆಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೆಆರ್ ಎಸ್  ಜಲಾಶಯದ ಒಳಹರಿವು ಏರಿಕೆಯಾಗಿದೆ.  ಮಂಗಳವಾರ ರಾತ್ರಿ ವೇಳೆಗೆ 78.20 ಅಡಿ ನೀರು ಸಂಗ್ರಹವಾಗಿದೆ.
ನಾಗರಹೊಳೆ,  ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಸೇರಿದಂತೆ ಹಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. 
ಹಾರಂಗಿ ಜಲಾಶಯದ ಒಳಹರಿವು 5,112 ಕ್ಯೂಸೆಕ್ಸ್ ಗೆ ಏರಿಕೆಯಾಗಿದೆ. ಮೈಸೂರು ಮತ್ತು ನಂಜನಗೂಡಿನಲ್ಲಿ ಶೀತಗಾಳಿ ಮುಂದುವರಿದಿದ್ದು, ತುಂತುರು ಮಳೆಯಾಗುತ್ತಿದೆ. 
ಗೊರೂರಿನ ಹೇಮಾವತಿ ನದಿಯಲ್ಲಿ ಒಳ ಹರಿವು ತೀವ್ರವಾಗಿ ಏರಿಕೆಯಾಗಿದೆ. ಉತ್ತಮವಾಗಿ ಮಳೆಯಾಗುತ್ತಿರುವ ಕಾರಣ ಸಕಲೇಶಪುರ, ಆಲೂರು, ಬೇಲೂರು, ಮತ್ತು ಅರಕಲಗೂಡು ತಾಲೂಕಿನ ರೈತರು ಬಿತ್ತಿದ ಬೆಳೆ ಉಳಿಸಿಕೊಳ್ಳುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com