ಬೆಂಗಳೂರು: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಹತ್ಯೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಉತ್ತರ ಪ್ರದೇಶ ವಿಶೇಷ ತನಿಖಾ ತಂಡದಿಂದ ಇಬ್ಬರು ಪೊಲೀಸ್ ಅಧಿಕಾರಿಗಳು ಇಂದು ನಗರಕ್ಕೆ ಆಗಮಿಸಿದ್ದಾರೆ.
ಕರ್ನಾಟಕ-ಕೇಡರ್ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಲಕ್ನೋದಲ್ಲಿ ಕಳೆದ ತಿಂಗಳು 17ರಂದು ತಮ್ಮ 36ನೇ ಹುಟ್ಟುಹಬ್ಬದಂದು ಮೀರಾ ಬಾಯ್ ಅತಿಥಿ ಗೃಹದ ಸಮೀಪ ರಸ್ತೆ ಬದಿಯಲ್ಲಿ ಶವವಾಗಿ ಸಿಕ್ಕಿದ್ದರು.
ವಿಶೇಷ ತನಿಖಾ ತಂಡದಲ್ಲಿ ಹೆಚ್ಚುವರಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅವಿನಾಶ್ ಮಿಶ್ರಾ, ಇನ್ಸ್ ಪೆಕ್ಟರ್ ಆನಂದ್ ಶಾಹಿ ಸೇರಿದ್ದಾರೆ. ಇವರ ಜೊತೆ ತಿವಾರಿ ಸೋದರ ಮಾಯಾಂಕ್ ಕೂಡ ಇದ್ದಾರೆ.
ತಿವಾರಿಯವರು ಮೃತಪಟ್ಟ ನಂತರ ಸಾಮಾನ್ಯ ತನಿಖೆಯಾಗಿ ತನಿಖಾ ತಂಡದ ಅಧಿಕಾರಿಗಳು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಚೇರಿಗೆ ಭೇಟಿ ನೀಡಿದ್ದಾರೆ. ತಿವಾರಿಯವರ ಕೊನೆಯ ಕಚೇರಿಯನ್ನು ಭೇಟಿ ಮಾಡಿದ್ದಲ್ಲದೆ ಮುಖ್ಯ ಕಾರ್ಯದರ್ಶಿಯವರನ್ನು ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ತಿವಾರಿಯವರ ಕೊಲೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಂಡ ತನಿಖೆ ಮಾಡುತ್ತಿದೆ. ಅನೇಕ ಜನರನ್ನು ತಂಡ ಪ್ರಶ್ನೆ ಮಾಡುವುದಲ್ಲದೆ ಆರೋಪಗಳ ನಿಜಸ್ಥಿತಿಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ಮಾಡುತ್ತದೆ. ಅಗತ್ಯಬಿದ್ದರೆ ಸಂಬಂಧಪಟ್ಟ ಸಚಿವರನ್ನು ಕೂಡ ತನಿಖೆ ಮಾಡಲಾಗುವುದು ಎಂದರು.
ತನಿಖೆ ಮುಂದುವರಿಸಲು ಇನ್ನೂ ಕೆಲ ದಿನಗಳ ಕಾಲ ತಂಡ ನಗರದಲ್ಲಿಯೇ ಉಳಿದುಕೊಳ್ಳಲಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮೂಲಗಳ ಪ್ರಕಾರ, ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ತನಿಖಾ ತಂಡ ಅನುರಾಗ್ ತಿವಾರಿ ಸಾವಿಗೂ ಮುನ್ನ ಕೆಲಸ ಮಾಡುತ್ತಿದ್ದ ಇಲಾಖೆಗೆ ಭೇಟಿ ನೀಡಿದ್ದಾರೆ. ತಿವಾರಿಯವರ ಖಾಸಗಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ತನಿಖೆ ಅಪರಾಹ್ನ 3.30 ರವರೆಗೆ ಮುಂದುವರಿದಿತ್ತು. ನಂತರ ಅವರು ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮಕ್ಕೆ ಭೇಟಿ ನೀಡಿದರು.
ತಿವಾರಿಯವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಯುಕ್ತರಾಗುವುದರ ಜೊತೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೂಡ ಆಗಿದ್ದರು.