ಮೈಸೂರು: ಕೇರಳದ ವೈನಾಡಿನಲ್ಲಿ ಉತ್ತಮವಾಗಿ ಮುಂಗಾರು ಮಳೆಯಾಗುತ್ತಿದ್ದು, ಕಬಿನಿ ಜಲಾಶಯದ ನೀರಿನ ಮಟ್ಟದಲ್ಲಿ ಏಳು ಅಡಿ ಏರಿಕೆಯಾಗಿದೆ. ಹೀಗಾಗಿ ಮೈಸೂರು ಮತ್ತು ಬೆಂಗಳೂರು ನಗರಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದು.
ಪ್ರತಿ ಬಾರಿಗಿಂತ ಈ ಬಾರಿ ಜಲಾಶಯದ ನೀರಿನ ಮಟ್ಟ ತೀರಾ ಕಡಿಮೆಯಾಗಿತ್ತು. ಕೇವಲ 2 ಟಿಎಂಸಿ ಅಡಿ ಮಾತ್ರ ನೀರು ಸಂಗ್ರಹವಾಗಿತ್ತು, ಕಾವೇರಿ ನದಿ ಪಾತ್ರದ ನಗರ ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ.
ಮುಂಗಾರು ವಿಳಂಬವಾಗಬಹುದೆಂಬ ಹಿನ್ನೆಲೆಯಲ್ಲಿ ನೀರಾವರಿ ಅಧಿಕಾರಿಗಳು ನೀರಿನ ಸಂಗ್ರಹ ಮಾಡಿದ್ದರು. ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಒಳಹರಿವು ಹೆಚ್ಚಿದೆ, ಹೀಗಾಗಿ ಕಬಿನಿ ಜಲಾಶಯ ನೀರಿನ ಮಟ್ಟ ಏರಿಕೆಯಾಗಿದೆ.
2,284 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2,249.75 ಅಡಿ ನೀರು ಸಂಗ್ರಹವಾಗಿದೆ. ಒಳಹರಿವು ಹೆಚ್ಚಳ ವಾಗಿದ್ದು, 1,296 ಕ್ಯುಸೆಕ್ ಮತ್ತು. ಹೊರಹರಿವು 1,077 ಕ್ಯುಸೆಕ್ ಇದೆ.ಕಳೆದ ವರ್ಷ ಈ ವೇಳೆಗೆ ಜಲಾಶಯದಲ್ಲಿ 72.92 ಅಡಿ ನೀರು ಸಂಗ್ರಹವಾಗಿತ್ತು.
ಕೊಡಗು ಜಿಲ್ಲೆಯಲ್ಲಿ ಹೆಚ್ಚು ಮಳೆಯಾದರೇ ಜಲಾಶಯದ ನೀರಿನ ಮಟ್ಟ ಏರಿಕೆಯಾಗಲಿದೆ. ಮಂಡ್ಯ ರೈತರ ಮೊಗದಲ್ಲಿ ಮಂದಹಾಸ ಮೂಡಲಿದೆ.
ಕಳೆದ ಒಂದು ವಾರದಿಂದ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಳೆಯಿಲ್ಲದ ಕಾರಣ ರೈತರು ಮತ್ತೆ ಚಿಂತೆಯಲ್ಲಿ ಮುಳುಗುವಂತೆ ಮಾಡಿದೆ.
ಕೆಆರ್ ಎಸ್ ಜಲಾಶಯದಿಂದ ನೀರಾವರಿ ಅಧಿಕಾರಿಗಳು ನೀರು ಬಿಡುಗಡೆ ಮಾಡಿ 1 ತಿಂಗಳೇ ಕಳೆದಿದೆ. ಕಬಿನಿ ಜಲಾಶಯದಲ್ಲಿರುವ ನೀರನ್ನು ಅಧಿಕಾರಿಗಳು ಬೆಂಗಳೂರಿಗೆ ಪೂರೈಕೆ ಮಾಡುತ್ತಿದ್ದಾರೆ.
ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ ಕೋಟೆ ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದಾರೆ. ಮಳೆ ಬರುವುದು ತಡವಾದರೇ ಬಿತ್ತನೆ ಮಾಡಿರುವ ರೈತರು ಮತ್ತಷ್ಟ ಸಮಸ್ಯೆಯಲ್ಲಿ ಸಿಲುಕಲಿದ್ದಾರೆ.