ಹುಬ್ಬಳ್ಳಿ: ಕಿಡ್ನಾಪ್ ಆದ 3 ವರ್ಷದ ಬಾಲಕ 24 ಗಂಟೆಗಳಲ್ಲೇ ಪತ್ತೆ
ಹುಬ್ಬಳ್ಳಿ: ಅಪಹರಣಗೊಂಡಿದ್ದ ಮೂರು ವರ್ಷದ ಬಾಲಕ 24 ಗಂಟೆಯೊಳಗೆ ಮರಳಿ ತನ್ನ ಅಪ್ಪ - ಅಮ್ಮನನ್ನು ಸೇರಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ವೀರಭದ್ರೇಶ್ವರ ಕಾಲೋನಿಯ ನಿವಾಸಿಗಳಾದ ಮಾರ್ಟಿನ್ ಮತ್ತು ಮೇಘ ದಂಪತಿಯ 2ನೇ ಪುತ್ರ ಮೈಕೆಲ್ ಶನಿವಾರ ಕಾಣೆಯಾಗಿದ್ದ.
ಮೈಕೆಲ್ ತಾಯಿ ಮೇಘನಾ ಮಾರುಕಟ್ಟೆಗೆ ಹೋಗಬೇಕಾಗಿದ್ದರಿಂದ ಮಗುವನ್ನು ನೆರೆಮನೆಯ ಲಕ್ಷ್ಮಿ ಎಂಬುವರ ಬಳಿ ಬಿಟ್ಟು ಹೋಗಿದ್ದರು. ಪಾತ್ರೆ ತೊಳೆಯುತ್ತಿದ್ದ ಲಕ್ಷ್ಮಿ ನೀರು ತರಲು ಮನೆಯ ಒಳಗೆ ಹೋಗಿ ಬರುವಷ್ಟರಲ್ಲಿ ನಾಪತ್ತೆಯಾಗಿದ್ದ. ಆತನನ್ನು ಹುಡುಕಾಡಿದ ಲಕ್ಷ್ಮಿ ಕೂಡಲೇ ಮೈಕೆಲ್ ಪೋಷಕರಿಗೆ ವಿಷಯ ತಿಳಿಸಿದಳು. ಸುತ್ತ ಮುತ್ತಲಿನ ಎಲ್ಲಾ ಪ್ರದೇಶಗಳಲ್ಲೂ ಹುಡುಕಾಡಿದರೂ ಬಾಲಕ ಪತ್ತೆಯಾಗಿರಲಿಲ್ಲ. ಈ ಸಂಬಂಧ ಬಾಲಕನ ಪೋಷಕರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳು ಬಾಲಕನನ್ನು ವಾಜಪೇಯಿ ನಗರದಲ್ಲಿ ಬಿಟ್ಟು ಪರಾರಿಯಾಗಿದ್ದರು. ಬಾಲಕ ಒಬ್ಬನೇ ನಿಂತು ಅಳುತ್ತಿದ್ದದ್ದನ್ನು ನೋಡಿದ ಸ್ಥಳೀಯ ನಿವಾಸಿಗಳು ಆತನಿಗೆ ತಿನ್ನಲು ಆಹಾರ ನೀಡಿದ್ದಾರೆ. ನಂತರ ರಾತ್ರಿ 10.30 ರ ವೇಳೆಗೆ ಮಕ್ಕಳ ಸಹಾಯವಾಣಿಗೆ ಅವರು ಮಾಹಿತಿ ನೀಡಿದ್ದಾರೆ.
ಬಾಲಕನನ್ನು ಕರೆತಂದ ಅಮೂಲ್ಯ ಮಕ್ಕಳ ಸಹಾಯವಾಣಿ ಕೇಂದ್ರದ ಸಿಬ್ಬಂದಿ ವಿದ್ಯಾನಗರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಭಾನುವಾರ ಮಧ್ಯಾಹ್ನ ಪೊಲೀಸರು ನಾಪತ್ತೆಯಾಗಿದ್ದ ಬಾಲಕನ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ. ಭಾನುವಾರ ಮಧ್ಯಾಹ್ನ ಮೈಕೆಲ್ ತನ್ನ ಪೋಷಕರನ್ನು ಸೇರಿದ್ದಾನೆ.
ಮೈಕೆಲ್ ತಂದೆ ಮಾರ್ಟಿನ್ ಎಪಿಎಂಸಿ ಯಲ್ಲಿ ನೌಕರನಾಗಿದ್ದು, ಆತನ ತಾಯಿ ಮೇಘನಾ ಗೃಹಿಣಿಯಾಗಿದ್ದಾಳೆ. ಈ ದಂಪತಿಗೆ ಮೂರು ಮಕ್ಕಳಿದ್ದು ಮೈಕೆಲ್ ಎರಡನೇ ಮಗನಾಗಿದ್ದಾನೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ