
ರಾಯಚೂರು: ಕಳೆದ ವರ್ಷ ಭಾರಿ ವಿವಾದಕ್ಕೆ ಕಾರಣವಾಗಿದ್ದ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಇನ್ನು ತನಿಖಾ ಹಂತದಲ್ಲಿ ಇರುವಂತೆಯೇ ಅಂತಹುದೇ ಮತ್ತೊಂದು ಪ್ರಕರಣ ನಡೆದ ಕುರಿತು ಶಂಕೆ ವ್ಯಕ್ತವಾಗುತ್ತಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆಯೊಂದು ರಾಯಚೂರಿನಲ್ಲಿ ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿರುವುದು ಇಂತಹುದೊಂದು ಶಂಕೆಗೆ ಕಾರಣವಾಗಿದೆ. ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ಸೋಮವಾರ ಬೆಳಗ್ಗೆ 10.30ರ ನಂತರ ರಾಯಚೂರಿನಲ್ಲಿ ಓಡಾಡಲು ಪ್ರಾರಂಭವಾಗಿತ್ತು. ವಿಷಯ ತಿಳಿದ ತಕ್ಷಣ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಅದು ಅಸಲಿ ಪತ್ರಿಕೆಯೇ, ಸೋರಿಕೆ ಯಾವಾಗ ಆಗಿದೆ ಎಂಬುದರ ಕುರಿತು ತನಿಖೆ ಪ್ರಾರಂಭಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ ಪ್ರಕರಣದ ತನಿಖೆಯನ್ನು ರಾಯಚೂರು ಎಸ್ಪಿ ನೇತೃತ್ವದ ತಂಡ ನಡೆಸುತ್ತಿದ್ದು, ಪ್ರಶ್ನೆ ಪತ್ರಿಕೆ ಬೆಳಗ್ಗೆ 10.30 ರ ಬಳಿಕ ವಾಟ್ಸ್ ಆಪ್ಗೆ ಬಂದಿದೆ. ಪರೀಕ್ಷೆ 10.15 ಕ್ಕೆ ಆರಂಭವಾಗಿರುವುದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಅಂತೆಯೇ ಇದಕ್ಕೆ ಪೂರಕವೆಂಬಂತೆ ಪ್ರಶ್ನೆ ಪತ್ರಿಕೆ ಕೆಳಗೆ ವಿದ್ಯಾರ್ಥಿಯೊಬ್ಬರ ಹಾಲ್ ಟಿಕೆಟ್ ಇದ್ದು, ಯಾರೋ ವಿದ್ಯಾರ್ಥಿಗಳು ವದಂತಿ ಹಬ್ಬಿಸಲು ಹೀಗೆ ಮಾಡಿರುವ ಸಾಧ್ಯತೆ ಇದೆ. ಸೋಮವಾರ ಸಂಜೆಯೊಳಗೆ ಸತ್ಯಾಂಶ ಬಯಲಿಗೆ ಬರಲಿದೆ ಎಂದು ಪಿಯು ಮಂಡಳಿ ನಿರ್ದೇಶಕಿ ಸಿ. ಶಿಖಾ ಮಾಧ್ಯಮ ಹೇಳಿಕೆ ನೀಡಿದ್ದಾರೆ.
ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿರುವ ಪ್ರಶ್ನೆ ಪತ್ರಿಕೆ ರಾಯಚೂರಿನಲ್ಲೇ ಬಹಿರಂಗಗೊಂಡಿದೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಜತೆಗೆ ಪರೀಕ್ಷೆ ನಂತರ ಫೋಟೋ ತೆಗೆದು ಹರಿಬಿಟ್ಟಿರುವ ಸಾಧ್ಯತೆಗಳೂ ಇದೆ. ಸತ್ಯಾಂಶ ತನಿಖೆ ಪೂರ್ಣಗೊಂಡ ನಂತರ ತಿಳಿಯಲಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದಾರೆ.
Advertisement