ಬೆಂಗಳೂರು: ನಿಷೇಧಿತ ನೋಟುಗಳ ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಅವರಿಂದ ರು. 50 ಲಕ್ಷ ಮೌಲ್ಯದ ಹಳೇ ನೋಟುಗಳನ್ನು ಜಪ್ತಿ ಮಾಡಿದ್ದಾರೆ.
ಆಭರಣ ವ್ಯಾಪಾರಿ ಆನಂದ್ ಜೈನ್ ಹಾಗೂ ರಿಯಲ್ ಎಸ್ಟೇಟ್ ಏಜೆಂಟ್ ವಿನಾಯಕ್ ಪ್ರಸಾದ್ ಎಂಬುವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಗಳಾದ ಕೋರಮಂಗಲದ ವಿಜಯ್ಕುಮಾರ್ ಹಾಗೂ ಸಲಾಂ ಎಂಬುವರು ತಲೆಮರೆಸಿಕೊಂಡಿದ್ದಾರೆ.
ನಂಜಪ್ಪ ವೃತ್ತದ ಲಿಂಕ್ ರಸ್ತೆ ನಿವಾಸಿಯಾದ ಆನಂದ್ ಅವರಿಗೆ ಆರು ತಿಂಗಳ ಹಿಂದೆ ಪ್ರಸಾದ್ ಪರಿಚಯವಾಗಿತ್ತು. ಗರಿಷ್ಠ ಮುಖಬೆಲೆಯ ನೋಟುಗಳು ರದ್ದಾದ ಬಳಿಕ ಆನಂದ್ ತಮ್ಮ ಬಳಿ ಇದ್ದ ರು. 50 ಲಕ್ಷ ಮೌಲ್ಯದ ಹಳೇ ನೋಟುಗಳ ಬದಲಾವಣೆಗೆ ಮುಂದಾಗಿದ್ದರು.
ಈ ವಿಚಾರ ತಿಳಿದ ಪ್ರಸಾದ್, ಸಲಾಂ ಹಾಗೂ ವಿಜಯ್ ಎಂಬ ನನ್ನ ಸ್ನೇಹಿತರು ಹಳೇ ನೋಟುಗಳನ್ನು ಬದಲಾವಣೆ ಮಾಡಿಕೊಡುತ್ತಾರೆ. ಅದಕ್ಕೆ ಶೇ 50ರಷ್ಟು ಕಮಿಷನ್ ಕೊಡಬೇಕು. ನೀವು ಒಪ್ಪಿದರೆ, ಅವರ ಜತೆ ಮಾತನಾಡುತ್ತೇನೆ’ ಎಂದು ಹೇಳಿದ್ದರು. ಈ ಡೀಲ್ಗೆ ಒಪ್ಪಿಕೊಂಡ ಅವರು, ಶುಕ್ರವಾರ ತಮ್ಮ ಮನೆಗೆ ಬಂದು ವ್ಯವಹಾರ ಮುಗಿಸುವಂತೆ ತಿಳಿಸಿದ್ದರು.
ಸಲಾಂ ಹಾಗೂ ವಿಜಯ್, ಹಣ ಪಡೆದುಕೊಂಡು ಬರುವಂತೆ ಸಂಜೆ 6 ಗಂಟೆ ಸುಮಾರಿಗೆ ಪ್ರಸಾದ್ ಅವರನ್ನು ಆನಂದ್ ಮನೆಗೆ ಕಳುಹಿಸಿದ್ದರು. ತಮ್ಮ ಬಾತ್ಮೀದಾರರ ಮೂಲಕ ಈ ವಿಚಾರ ತಿಳಿದ ಪೊಲೀಸರು, ಅದೇ ವೇಳೆ ಮಫ್ತಿಯಲ್ಲಿ ದಾಳಿ ನಡೆಸಿದಾಗ ಪ್ರಸಾದ್ ಸಿಕ್ಕಿ ಬಿದ್ದಿದ್ದಾರೆ.
Advertisement