ಮೇಕೆ ಕದಿಯಲು ಯತ್ನ ಆರೋಪ: ತುಮಕೂರಿನಲ್ಲಿ ದಲಿತ ವ್ಯಕ್ತಿಗೆ ಥಳಿಸಿ ಹತ್ಯೆ

ಮೇಕೆ ಕದಿಯಲು ಯತ್ನಿಸಿದನೆಂಬ ಆರೋಪದ ಮೇಲೆ ಹಲ್ಲೆ ಮಾಡಿದ ಪರಿಣಾಮ ವ್ಯಕ್ತಿಯೋರ್ವ ಮೃತ ಪಟ್ಟಿರುವ ಘಟನೆ ತುಮಕೂರಿನಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತುಮಕೂರು: ಮೇಕೆ ಕದಿಯಲು ಯತ್ನಿಸಿದನೆಂಬ ಆರೋಪದ ಮೇಲೆ ಹಲ್ಲೆ ಮಾಡಿದ ಪರಿಣಾಮ ವ್ಯಕ್ತಿಯೋರ್ವ ಮೃತ ಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಜಿಲ್ಲೆಯ ಮಧುಗಿರಿ ತಾಲೂಕಿನ ಜೋಗೇನಹಳ್ಳಿಯಲ್ಲಿ ಮಂಗಳವಾರ ಮುಂಜಾನೆ ಈ ಘಟನೆ ಸಂಭವಿಸಿದ್ದು, ಕೃಷ್ಣಪ್ಪ ಎಂಬಾತ ಸಾವನ್ನಪ್ಪಿದ್ದಾನೆ. ಕೃಷ್ಣಪ್ಪ ಆಂಧ್ರ ಪ್ರದೇಶದ ಮಡಕಾ ಶಿರಾ ತಾಲೂಕಿನ ಮಣ್ಣೂರು ಗ್ರಾಮದವನು ಎಂದು ಗುರುತಿಸಲಾಗಿದೆ.

ಈ ಸಂಬಂಧ ರಾಮರೆಡ್ಡಿ  ಆತನ ಮಗ ಬಾಬು ಮತ್ತು ನಾಗರಾಜ ಎಂಬುವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಕಷ್ಣಪ್ಪ ಮೂವರ ಜೊತೆ ಬೆಳಗಿನ 3 ಗಂಟೆ ವೇಳೆಗೆ ಮೇಕೆ ಕದಿಯಲು ರಾಮರೆಡ್ಡಿ ಮನೆಗೆ ಬಂದಿದ್ದ. ಈ ವೇಳೆ ಎಚ್ಚರಗೊಂಡ ರಾಮರೆಡ್ಡಿ ಮತ್ತಿತ್ತರು ಹೊರ ಬಂದು ನೋಡಿದಾಗ, ಕೃಷ್ಣಪ್ಪ ಮೇಕೆಯನ್ನು ಎಳೆದೊಯ್ಯುತ್ತಿದ್ದದ್ದು ಕಂಡು ಬಂತು.

ಅಪಾಯವನ್ನರಿತ ಕೃಷ್ಣಪ್ಪ ಜೊತೆ ಬಂದಿದ್ದ ಮತ್ತಿಬ್ಬರು ಪರಾರಿಯಾದರು. ಆದರೆ ಕೃಷ್ಣಪ್ಪ ಕತ್ತಲೆಯಲ್ಲಿ ಸಿಕ್ಕಿಬಿದ್ದ. ಮೂವರು ಕೃಷ್ಣಪ್ಪನನ್ನು ಮರಕ್ಕೆ ಕಟ್ಟಿ ಮರದ ತುಂಡುಗಳಿಂದ ಥಳಿಸಿದ್ದಾರೆ.

ಈ ವೇಳೆ ಸ್ಥಳಕ್ಕೆ ಬಂದ ಮಧುಗಿರಿ ಪೊಲೀಸ್ ಇನ್ಸ್ ಪೆಕ್ಟರ್ ನರಸಿಂಹ ಮೂರ್ತಿ ಶವವನ್ನು ವಶಕ್ಕೆ ಪಡೆದಿದ್ದಾರೆ. ಕೃಷ್ಣಪ್ಪ ಸಂಬಂಧಿಕರು ಹಾಗೂ ಕೆಲವು ದಲಿತ ಮುಖಂಡರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೊಡಿಗೆನಹಳ್ಳಿ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com