ಬೆಂಗಳೂರು: ಭಾನುವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ರಾಜಧಾನಿಯಲ್ಲಿ 9 ಮರಗಳು ಹಾಗೂ ಹಲವು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ದೊಮ್ಮಲೂರು 33ಮಿಮೀ, ಅಗ್ರಹಾರ 32.5 ಮಿಮೀ, ಕೋರಮಂಗಲದಲ್ಲಿ 31.5 ಮಿಮೀ ಮಳೆಯಾಗಿದೆ.ಸೋಮವಾರ ಸಂಜೆ ಕೂಡ ಮಳೆಯಾಗುವ ಸಾಧ್ಯತೆಯಿದೆ.
ಬಿಬಿಎಂಪಿ ಸಹಾಯವಾಣಿಯ ಮಾಹಿತಿಯಂತೆ 9 ಮರಗಳು ಉರುಳಿ ಬಿದ್ದಿವೆ. ವಿದ್ಯುತ್ ಕಂಬ ಮುರಿದು ಬಿದ್ದಿರುವ ಸಂಬಂಧ ಬೆಸ್ಕಾಂ ಹೆಲ್ಪ್ ಲೈನ್ ಗೆ ಸುಮಾರು 25 ದೂರುಗಳು ದಾಖಲಾಗಿವೆ.
ಕೋರಮಂಗಲ ಉಪ ವಿಭಾಗವೊಂದರಲ್ಲೇ ಸುಮಾರು 10 ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಬಗ್ಗೆ ದೂರು ದಾಖಲಾಗಿದೆ. ಎಲೆಕ್ಟ್ರಾನಿಕ್ ಸಿಟಿ2ನೇ ಹಂತದಲ್ಲಿ 4 ಕೇಂಬ್ರಿಡ್ಜ್ ರಸ್ತೆ ಮತ್ತು ಎಚ್ ಎಸ್ ಎರ್ ಲೇಔಟ್ ನಲ್ಲಿ ತಲಾ 4 ಕಂಬಗಳು ಉರುಳಿ ಬಿದ್ದಿವೆ. ಇದರಿಂದಾಗಿ ನಗರದ ಕೆಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಯಿತು.
ಧಾರವಾಡ, ಉತ್ತರ ಕನ್ನಡದ ಕೆಲ ಭಾಗಗಳು, ಹಾವೇರಿ, ಕೊಡಗು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಿದೆ.
ದಾವಣಗೆರೆ ಜಿಲ್ಲೆ ತೋರಣಗಟ್ಟಿ ತಾಲೂಕಿನ ಜಗಳೂರಿನಲ್ಲಿ ದಾಖಲೆಯ 64.5ಮಿಮೀ ಮಳೆಯಾಗಿದೆ.