ಯಾತ್ರೆಗೆ ವಿಶೇಷ ರಥ ಸಿದ್ಧ
ಪರಿವರ್ತನಾ ಯಾತ್ರೆಗೆ ಸಂಬಂಧಿಸಿದಂತೆ ಸುಮಾರು ರೂ.90ಲಕ್ಷ ವೆಚ್ಚದಲ್ಲಿ ವಿಶೇಷ ರಥವನ್ನು ಸಿದ್ಧಪಡಿಸಲಾಗಿದ್ದು, ಯಾತ್ರೆಯ ಜೊತೆಗೆ ರಥಕ್ಕೂ ಅಮಿತ್ ಶಾ ಅವರು ಹಸಿರು ನಿಶಾನೆ ತೋರಲಿದ್ದಾರೆ.
ಟಾಟಾ ಸಂಸ್ಥೆಯ ವಾಹನವನ್ನು ಕೇಸರಿ ರಥದ ರೀತಿ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಪರಿವರ್ತನಾ ಯಾತ್ರೆ ಮತ್ತು ಕನ್ನಡಿಗರ ಭರವಸೆಯ ಸರ್ಕಾರಕ್ಕೆ ನಾವು ಬದ್ಧ ಎಂಬ ಘೋಷವಾಕ್ಯವನ್ನು ಬರೆಯಲಾಗಿದೆ. ಸುಮಾರು 12 ಜನ ನಿಂತುಕೊಳ್ಳಲು ಸಾಧ್ಯವಾಗುವ ವೇದಿಕೆ ರಥದಲ್ಲಿ ನಿರ್ಮಾಣ ಮಾಡಲಾಗಿದ್ದು, ಸುಮಾರು 2,000 ಮಂದಿಗೆ ಕೇಳಲು ಸಾಧ್ಯವಾಗುವ ಸಾಮರ್ಥ್ಯವುಳ್ಳ ಮೈಕ್ ನ್ನು ಅಳವಡಿಸಲಾಗಿದೆ.
ರಥ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಒಂದು ತಿರುಗುವ ಕುರ್ಚಿ ಮತ್ತು ಮೇಜನ್ನು ಅಳವಪಡಿಸಲಾಗಿದೆ. ಅಲ್ಲದೆ, ವಿಶ್ರಾಂತಿ ಮತ್ತು ಮಾತುಕತೆಗಾಗಿ ಪ್ರತ್ಯೇಕ ಕೊಠಡಿ ಜೊತೆಗೆ ಶೌಚಾಲಯ, ಅಡುಗೆ ಮನೆ ವ್ಯವಸ್ಥೆ ಕೂಡ ವಾಹನದಲ್ಲಿದೆ.
ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಯಾತ್ರೆಯ ಉದ್ಘಾಟನಾ ಸಮಾರಂಭದ ನಂತರ ಅಲ್ಲಿಯೇ ಮಧ್ಯಾಹ್ನ ಭೋಜನ ನಡೆಯಲಿದೆ. ನಂತರ ಯಾತ್ರೆ ಆರಂಭವಾಗಲಿದ್ದು, ಮೊದಲ ದಿನ ತುಮಕೂರು ಜಿಲ್ಲೆಯ ಕುಣಿಗಲ್ ಮೂಲಕ ಸಂಚರಿಸಿ ಯಡಿಯೂರಿನಲ್ಲಿ ವಾಸ್ತವ್ಯ ಹೂಡಲಿದೆ. ಪ್ರತಿ ನಿತ್ಯ ಮೂರರಿಂದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಹಾದು ಹೋಗಲಿರುವ ಯಾತ್ರೆಗೆ ಹೆಚ್ಚು ಕಡಿಮೆ ವಾರಕ್ಕೆ ಒಂದರಂತೆ ವಿಶ್ರಾಂತಿ ನೀಡಲಾಗುತ್ತದೆ.
ಯಾತ್ರೆಯಲ್ಲಿ ರಾಷ್ಟ್ರೀಯ ನಾಯಕರು ಭಾಗಿ
ಬಿಜೆಪಿ ನಡೆಸುತ್ತಿರುವ ಈ ಬೃಹತ್ ರ್ಯಾಲಿಯಲ್ಲಿ ರಾಷ್ಟ್ರೀಯ ನಾಯಕರು ಭಾಗಿಯಾಗಲಿದ್ದಾರೆಂದು ಹೇಳಲಾಗುತ್ತಿದೆ. ಉತ್ತಪ್ರದೇಶ ಮುಖ್ಯಮಂತ್ರಿ ಯೋದಿ ಆದಿತ್ಯನಾಥ್ ಅವರು ಡಿ.30 ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ.
ಇನ್ನು ಕೇಂದ್ರ ಸಚಿವೆ ಉಮಾ ಭಾರತಿಯವರು ನ.30 ರಂದು ಬೆಳಗಾವಿ ಜಿಲ್ಲೆಯಲ್ಲಿ ನಡೆಯುವ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ. ಸಾಧ್ವಿ ನಿರಂಜನ್ ಜ್ಯೋತಿಯವರೂ ಕೂಡ ಡಿ.11 ರಂದು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಡಿ.21 ರಂದು ಹುಬ್ಬಳ್ಳಿಗೆ, ಅರುಣ್ ಜೇಟ್ಲಿಯವರು ನ11 ರಂದು ಮಂಗಳೂರು ಹಾಗೂ ನಿತಿನ್ ಗಡ್ಕರಿಯವರು ಡಿ.28 ರಂದು ಶಿವಮೊಗ್ಗದಲ್ಲಿ ನಡೆಯುವ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ.
ಯಾತ್ರೆ ವೇಳೆ ರಾಜ್ಯದಲ್ಲಿ ಸಿದ್ಧರಾಮಯ್ಯ ಸರ್ಕಾರ ವೈಫಲ್ಯಗಳು, ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮಾಡಿರುವ ಸಾಧನೆಗಳು ಪ್ರಮುಖವಾಗಲಿದೆ.