ಬಳಿಕ ಭಾಷಾ ನೀತಿ ಕುರಿತಂತೆ ಮಾತನಾಡಿರುವ ಅವರು, ಸ್ಥಳೀಯ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ಮೊದಲನೇ ತರಗತಿಯಿಂದಲೇ ಕನ್ನಡ ವಿಷಯವನ್ನು ಉತ್ತೇಜಿಸಬೇಕು. ಇದಕ್ಕೆ ಕಾನೂನು ಅಡಚಣೆಗಳಿವೆ. ಈ ಕುರಿತ ನಿರ್ಧಾರಗಳು ಪೋಷಕರಿಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್ ಹೇಳುತ್ತಿದೆ. ನ್ಯಾಯಾಲಯದ ಈ ಆದೇಶ ಕೇವಲ ಕನ್ನಡಕ್ಕಷ್ಟೇ ಅಲ್ಲದೆ ಸ್ಥಳೀಯ ಭಾಷೆಗಳಿಗೂ ಭಾರೀ ಹೊಡೆತವನ್ನು ನೀಡಿದೆ. ಹೀಗಾಗಿ ಸ್ಥಳೀಯ ಭಾಷೆಗಳಿಗಾಗಿ ಸಂವಿಧಾನದಲ್ಲಿ ತಿದ್ದುಪಡಿ ತರುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಆದರೆ, ಪ್ರತಿಕ್ರಿಯೆಗಳು ಉತ್ತಮವಾಗಿ ಬಂದಿಲ್ಲ. ಈ ಬಗ್ಗೆ ಮತ್ತೆ ಸಿದ್ದರಾಮಯ್ಯ ಅವರು ಎಲ್ಲಾ ರಾಜ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಬೆಂಗಳೂರಿನಲ್ಲಿಯೇ ಸಭೆ ನಡೆಸಿ ಮನವರಿಕೆ ಮಾಡುವಂತೆ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆಂದಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಕನ್ನಡದ ಅನುಷ್ಠಾನ ಉತ್ತಮವಾಗಿದೆ. ಆದರೆ, ನಗರ ಪ್ರದೇಶಗಳಲ್ಲಿ ಬೆಳವಣಿಗೆ ಉತ್ತಮವಾಗಿಲ್ಲ. ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳೇ ಆಡಳಿತ ಭಾಷೆಯಾಗಿದೆ. ಆದರೆ, ರಾಜ್ಯದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಶೇ.80 ರಷ್ಟು ಪ್ರಮಾಣದಲ್ಲಿ ಕನ್ನಡ ಬಳಕೆಯಾಗುತ್ತಿದ್ದರೆ, ರಾಜಧಾನಿ ಮತ್ತು ಕೇಂದ್ರ ಕಚೇರಿಗಳಲ್ಲಿ ಇಂದಿಗೂ ಇಂಗ್ಲೀಷ್ ನಲ್ಲಿ ವ್ಯವಹರಿಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಆಡಳಿತ ಭಾಷೆಯನ್ನಾಗಿ ಮಾಡುವ ನೀತಿ ಜಾರಿ ಮಾಡಬೇಕೆಂದು ಹೇಳಿದ್ದಾರೆ.
ಇದೇ ವೇಳೆ ವಿವಾದಿತ ಟಿಪ್ಪು ಜಯಂತಿ ಆಚರಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಟಿಪ್ಪು ಜಯಂತಿ ಆಚರಣೆ ಕುರಿತಂತೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ಕನ್ನಡ ರಾಜ್ಯೋತ್ಸವ ಇವುಗಳನ್ನು ಹೊರತುಪಡಿಸಿ ಇತರೆ ಯಾವುದೇ ಜಯಂತಿಗಳಿಗೂ ರಜೆ ಘೋಷಣೆ ಮಾಡಬಾರದು. ನಾನು ಸಮುದಾಯದ ಜಯಂತಿಗಳನ್ನು ಮಾಡುವ ಮೂಲಕ ಸರ್ಕಾರ ಸಾಕಷ್ಟು ರಜೆಗಳನ್ನು ನೀಡುತ್ತಿದೆ. ಈ ಮೂಲಕ ಸಮಯ ಮತ್ತು ರಾಜ್ಯದ ವರಮಾನವನ್ನು ವ್ಯರ್ಥ ಮಾಡಲಾಗುತ್ತಿದೆ. ಸಮುದಾಯದ ಜಯಂತಿಗಳು ನಡೆದರೆ ಅದಕ್ಕೆ ನಿರ್ಬಂಧಿತ ರಜೆ ನೀಡಲಿ. ಟಿಪ್ಪು ಜಯಂತಿ ಬೇಕೆ, ಬೇಡವೇ ಎಂಬುದರ ಬಗ್ಗೆ ನಾನು ಖಚಿತವಾಗಿ ಏನನ್ನೂ ಹೇಳುವುದಿಲ್ಲ ಎಂದು ತಿಳಿಸಿದ್ದಾರೆ.