ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ರಕ್ಷಣೆ

ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಜೀವರಕ್ಷಕ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆಯೊಂದು ಉತ್ತರ ಕನ್ನಡದ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಶನಿವಾರ ನಡೆದಿದೆ...
ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಣೆ
ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಣೆ
ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಜೀವರಕ್ಷಕ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆಯೊಂದು ಉತ್ತರ ಕನ್ನಡದ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಶನಿವಾರ ನಡೆದಿದೆ. 
ರಮೇಶ್ ಯಾದವ್ ಮತ್ತು ಕಮಲೇಶ್ ಕುಮಾರ್ ರಕ್ಷಣೆಗೊಳಗಾದ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. 
ರಮೇಶ್ ಉತ್ತರಪ್ರದೇಶದ ಮೂಲದವರಾಗಿದ್ದು, ಕಮಲೇಶ್ ಕುಮಾರ್ ಮಧ್ಯಪ್ರದೇಶದ ನಿವಾಸಿಯಾಗಿದ್ದಾರೆ. ಐವರು ಸ್ನೇಹಿತರೊಂದಿಗೆ ರಮೇಶ್ ಹಾಗೂ ಕಮಲೇಶ್ ಪ್ರವಾಸಕ್ಕೆಂದು ಪೋಷಕರಿಗೆ ಮಾಹಿತಿ ನೀಡದೆಯೇ ಗೋಕರ್ಣಕ್ಕೆ ಬಂದಿದ್ದರು. 
ಗೋಕರ್ಣ ಸಮುದ್ರದ ಬಳಿ ಬಂದ ರಮೇಶ್ ಹಾಗೂ ಕಮಲೇಶ್ ಇಬ್ಬರು ಈಜಲು ನೀರಿಗೆ ಇಳಿದಿದ್ದರು. ಈ ವೇಳೆ ಇಬ್ಬರೂ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಯುವಕರ ಕೂಗಾಟವನ್ನು ಕೇಳಿದ ಜೀವರಕ್ಷಕ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕಾಗಮಿಸಿ ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ. 
ಬಳಿಕ ಇಬ್ಬರೂ ವಿದ್ಯಾರ್ಥಿಗಳನ್ನು ಗೋಕರ್ಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಗೋಕರ್ಣ ಪೊಲೀಸರು ವಿಚಾರಣೆ ನಡೆಸಲು ಆರಂಭಿಸಿದಾಗ ವಿದ್ಯಾರ್ಥಿಗಳು ತಮ್ಮ ಹೆಸರನ್ನಷ್ಟೇ ಹೇಳಿದ್ದು, ಕಾಲೇಜಿನ ಹೆಸರು ಹಾಗೂ ಇನ್ನಿತರೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. 
ಪೋಷಕರಿಗೆ ಮಾಹಿತಿ ನೀಡದೆಯೇ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದು, ಈ ಕುರಿತ ಮಾಹಿತಿ ತಿಳಿದರೆ ಸಮಸ್ಯೆ ಎದುರಾಗುತ್ತದೆ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com