ಬೆಂಗಳೂರು: ಇನ್ಫೋಸಿಸ್ ನಲ್ಲಿ ಎಲ್ಲವೂ ಸರಿಯಾಗಿದೆ, ಹೀಗೆಂದು ಹೇಳಿದವರು ಇನ್ಫೋಸಿಸ್ ಸಹ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ, ಇನ್ಫೋಸಿಸ್ ವಿಜ್ಞಾನ ಫೌಂಡೇಶನ್ ಪ್ರಶಸ್ತಿ ಘೋಷಣೆ ಕಾರ್ಯಕ್ರಮದ ಹೊರಗೆ ಮಾತನಾಡುತ್ತಾ ಅವರು ಹೀಗೆ ಹೇಳಿದರು.
ಇನ್ಫೋಸಿಸ್ ಗೆ ಹೊಸ ಕಾರ್ಯ ನಿರ್ವಾಹಕ ಅಧಿಕಾರಿಯ(ಸಿಇಒ) ಹುಡುಕಾಟದಲ್ಲಿರುವ ಬಗ್ಗೆ ಪ್ರತಿಕ್ರಿಯಿಸಿದ ನಾರಾಯಣ ಮೂರ್ತಿ ಈಗಿನ ಅಧ್ಯಕ್ಷ ನಂದನ್ ನೀಲೆಕಣಿಗೆ ಯಾವುದೇ ಸಲಹೆ ನೀಡುವ ಅವಶ್ಯಕತೆಯಿಲ್ಲ, ಏಕೆಂದರೆ ಅವರು ಉತ್ತಮ ಸಿಇಒ ಆಗಿದ್ದರು ಎಂದರು.
ಉತ್ತಮ ಸಿಇಒ ಆಗಿರುವ ನಂದನ್ ನೀಲೆಕಣಿಯವರಿಗೆ ಸಂಸ್ಥೆಗೆ ಏನು ಅಗತ್ಯವಿದೆ ಎಂದು ಗೊತ್ತಿದೆ. ಹೀಗಾಗಿ ಅವರಿಗೆ ಸಲಹೆ ನೀಡುವ ಅವಶ್ಯಕತೆಯಿಲ್ಲ ಎಂದರು. ಪನಯಾ ಒಪ್ಪಂದದಲ್ಲಿ ಹಿಂದಿನ ಸಿಇಒ ವಿಶಾಲ್ ಸಿಕ್ಕಾ ಅವರಿಗೆ ನೀಲೇಕಣಿಯವರು ಕ್ಲೀನ್ ಚಿಟ್ ನೀಡಿರುವ ಬಗ್ಗೆ ನಾರಾಯಣ ಮೂರ್ತಿ ಕೆಲ ದಿನಗಳ ಹಿಂದೆಯಷ್ಟೇ ಬೇಸರ ವ್ಯಕ್ತಪಡಿಸಿದರು. ನಿನ್ನೆ ಕಾರ್ಯಕ್ರಮದಲ್ಲಿ ನಂದನ್ ನೀಲೆಕಣಿಯವರನ್ನು ಹೊಗಳಿದರು ಕೂಡ.
2015ರಲ್ಲಿ ಪನಾಯಾ ಲಿಮಿಟೆಡ್ ನಿಂದ ಇಸ್ರೇಲ್ ಯಾಂತ್ರೀಕೃತ ತಂತ್ರಜ್ಞಾನವನ್ನು ಪಡೆಯುವಲ್ಲಿ 200 ದಶಲಕ್ಷ ಡಾಲರ್ ಹಣದಷ್ಟು ವಿಶಾಖ್ ಸಿಕ್ಕಾ ಅಕ್ರಮವೆಸಗಿದ್ದರು ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಕಂಪೆನಿ ಯಾವುದೇ ಅವ್ಯವಹಾರ ನಡೆಸಿರುವುದು ಕಂಡುಬಂದಿಲ್ಲ ಎಂದು ಅಕ್ಟೋಬರ್ 24ರಂದು ನಂದನ್ ನಿಲೇಕಣಿ ಘೋಷಿಸಿದ್ದರು.
ನಾರಾಯಣ ಮೂರ್ತಿಯವರು ಒತ್ತಾಯಿಸಿದಂತೆ ತನಿಖೆಗೆ ಹೆಚ್ಚುವರಿ ವಿವರ ನೀಡಲು ಕೂಡ ಸಂಸ್ಥೆಯ ಮಂಡಳಿ ನಿರಾಕರಿಸಿತ್ತು. ಕಂಪೆನಿಯ ಕಳಪೆ ಆಡಳಿತದ ಬಗ್ಗೆ ನಾನು ಎತ್ತಿರುವ ಯಾವುದೇ ಪ್ರಶ್ನೆಗೆ ಮಂಡಳಿ ಪ್ರಾಮಾಣಿಕತೆಯಿಂದ ಉತ್ತರಿಸಲು ನಿರಾಕರಿಸಿದೆ ಎಂದು ಮೂರ್ತಿ ಆಪಾದಿಸಿದ್ದರು.
ಆದರೆ ನಿನ್ನೆಯ ತಮ್ಮ ಮಾತಿನಲ್ಲಿ ನಾರಾಯಣ ಮೂರ್ತಿಯವರ ವರಸೆ ಸಂಪೂರ್ಣ ಬದಲಾಗಿತ್ತು. ಇದೀಗ ನಂದನ್ ಇನ್ಫೋಸಿಸ್ ನ ಅಧ್ಯಕ್ಷರಾಗಿದ್ದು ನಾವೆಲ್ಲರೂ ಸುಖವಾಗಿ ನಿದ್ದೆ ಮಾಡಬಹುದು. ಅವರು ತುಂಬಾ ಸಂಘಟಿತ ವ್ಯಕ್ತಿ. ಅತ್ಯಂತ ಕಠಿಣ ಆಲೋಚನೆಗಳನ್ನು ಸರಳವಾಗಿಸುವುದು ಅವರ ಶಕ್ತಿಯಾಗಿದೆ. ಕಂಪೆನಿಯಲ್ಲಿ ಹಲವು ಸಂಕೀರ್ಣ ವಿಷಯಗಳಿವೆ. ಅವನ್ನು ನೀಲೆಕಣಿಯವರಿಗೆ ಬಿಟ್ಟುಬಿಟ್ಟು ನಾವು ಸುಮ್ಮನೆ ಕೂರೋಣ. ಅವರು ಅವರ ಕೆಲಸವನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂದು ನಾರಾಯಣ ಮೂರ್ತಿ ಶ್ಲಾಘಿಸಿದರು.