ಸರ್ಕಾರದ ಮುಖ್ಯಕಾರ್ಯದರ್ಶಿ ಹುದ್ದೆ: ಮುಂಚೂಣಿಯಲ್ಲಿ ರತ್ನಪ್ರಭ ಹೆಸರು

ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಈ ತಿಂಗಳ ಕೊನೆಯಲ್ಲಿ ತಮ್ಮ ಅಧಿಕಾರದಿಂದ ನಿವೃತ್ತಿಯಾಗಲಿದ್ದಾರೆ, ಹೀಗಾಗಿ ಮುಂದಿನ ...
ರತ್ನಪ್ರಭ
ರತ್ನಪ್ರಭ
ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಈ ತಿಂಗಳ ಕೊನೆಯಲ್ಲಿ ತಮ್ಮ ಅಧಿಕಾರದಿಂದ ನಿವೃತ್ತಿಯಾಗಲಿದ್ದಾರೆ, ಹೀಗಾಗಿ ಮುಂದಿನ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹಲವು ಹೆಸರುಗಳು ಕೇಳಿ ಬರುತ್ತಿವೆ.
ಹಿರಿಯ ಐಎಎಸ್ ಅಧಿಕಾರಿಗಳಾದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ರತ್ನಪ್ರಭ ಮತ್ತು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಟಿ.ಎಂ ವಿಜಯ್ ಭಾಸ್ಕರ್ ಹೆಸರುಗಳು ಮುಂಚೂಣಿಯಲ್ಲಿವೆ. 1981ರ ಬ್ಯಾಚ್ ನ ದಲಿತ ಐಎಎಸ್ ಅಧಿಕಾರಿ ರತ್ನಪ್ರಭ ಅವರ ಹೆಸರು ಕಳೆದ ಬಾರಿಯೇ ಕೇಳಿ ಬಂದಿತ್ತು.  ಆದರೆ ಬದಲಾದ ಸನ್ನಿವೇಶದಲ್ಲಿ ಯಾವುದೇ ವಿವಾದವಿಲ್ಲದ ಸುಭಾಷ್ ಕುಂಟಿಯಾ ಅವರನ್ನು ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು.
ಆದರೆ ಈ ಬಾರಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಹಾಗೂ ದಲಿತರ ಚ್ಯಾಂಪಿಯನ್ ಎಂದು ಬಿಂಬಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಮಹಿಳಾ ದಲಿತ ಅಧಿಕಾರಿಯನ್ನು ಮುಖ್ಯಕಾರ್ಯದರ್ಶಿಯಾಗಿ ನೇಮಿಸುವ ಅವಕಾಶವನ್ನು ನಿರಾಕರಿಸುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ರತ್ನಪ್ರಭ ಅವರನ್ನು ನೇಮಿಸದಿದ್ದರೇ ಜೆಡಿಎಸ್ ಮತ್ತು ಬಿಜೆಪಿಗಳು ಇದನ್ನೆ ದೊಡ್ಡ ರಾಜಕೀಯ ಅಸ್ತ್ರವನ್ನಾಗಿಸಿಕೊಳ್ಳುವ ಸಾಧ್ಯತೆಯಿದೆ, ಈ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ದಲಿತ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟುವ ಭೀತಿಯನ್ನು ಸರ್ಕಾರ ಎದುರಿಸುತ್ತಿದೆ.
2000 ದಲ್ಲಿ ತೆರೇಸಾ ಭಟ್ಟಾಚಾರ್ಯ, 2006 ರಲ್ಲಿ ಮಾಲತಿ ದಾಸ್ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಒಂದು ವೇಳೆ ಈಗಿನ ಕಾಂಗ್ರೆಸ್ ಸರ್ಕಾರ ರತ್ನಪ್ರಬಾ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿದರೇ ಅವರು ಮೂರನೇ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಲಿದ್ದಾರೆ.
1983ರ ಬ್ಯಾಚ್ ನ ಐಎಎಸ್ ಅಧಿಕಾರಿ ಟಿ.ಎಂ ವಿಜಯ್ ಭಾಸ್ಕರ್ ರತ್ನಪ್ರಭ ಅವರಿಗಿಂತ ಕಿರಿಯರಾಗಿದ್ದು, ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ ರತ್ನಪ್ರಭ ಅವರನ್ನು ಓವರ್ ಟೇಕ್ ಮಾಡಿ ವಿಜಯ್ ಭಾಸ್ಕರ್ ಅವರನ್ನು ನೇಮಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com