ರಾಜ್ಯ
ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವತಿ ಶವ ಒಳಚರಂಡಿಯಲ್ಲಿ ಪತ್ತೆ!
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮೋರಿಯಲ್ಲಿ ಕೊಚ್ಚಿ ಹೋಗಿದ್ದ ಯುವತಿ ಪುಷ್ಪಾ ಮೃತದೇಹ ಭಾನುವಾರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು: ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮೋರಿಯಲ್ಲಿ ಕೊಚ್ಚಿ ಹೋಗಿದ್ದ ಯುವತಿ ಪುಷ್ಪಾ ಮೃತದೇಹ ಭಾನುವಾರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಕುರುಬರಹಳ್ಳಿಯ ರಾಜಕಾಲುವೆಯಲ್ಲಿ ಶುಕ್ರವಾರ ಸಂಜೆ ಕೊಚ್ಚಿಹೋಗಿದ್ದ ಯುವತಿ ಪುಷ್ಪಾ ಮೃತದೇಹ ಕುಂಬಳಗೋಡು ಸಮೀಪದ ರಾಜಕಾಲುವೆಯಲ್ಲಿ ಇಂದು ಪತ್ತೆಯಾಗಿದೆ. ಸತತ ಕಾರ್ಯಾಚರಣೆಯ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪುಷ್ಪ ಶವವನ್ನು ಪತ್ತೆ ಹಚ್ಚಿ ನೀರಿನಿಂದ ಮೇಲಕ್ಕೆತ್ತಿದ್ದಾರೆ. ಪ್ರಸ್ತುತ ಪುಷ್ಪಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿ ಮಾಡಲಾಗಿದೆ.
ಆದರೆ ಅಂದು ಯುವತಿ ಪುಷ್ಪಾಳ ಜೊತೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ತಾಯಿ ನಿಂಗಮ್ಮ ಅವರ ಮೃತದೇಹ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಕುರುಬರಹಳ್ಳಿ ರಾಜಾಕಾಲುವೆಯಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಎಸ್ ಡಿಆರ್ ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಿಂಗಮ್ಮ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕಳೆದ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಕುರುಬರಹಳ್ಳಿಯ ಜೆಸಿನಗರದಲ್ಲಿರುವ ನಿಂಗಮ್ಮ ಅವರ ಮನೆಗೆ ನೀರು ನುಗ್ಗಿತ್ತು. ಹೀಗಾಗಿ ತಾಯಿ ನಿಂಗಮ್ಮ ಹಾಗೂ ಮಗಳಾದ ಪುಷ್ಪಾ ಸುರಕ್ಷಿತ ಸ್ಥಳಕ್ಕೆ ಹೋಗಲು ಹೊರ ಬಂದರು. ಈ ವೇಳೆ ನೀರಿನ ರಭಸಕ್ಕೆ ಸಿಕ್ಕ ಇಬ್ಬರೂ ನೀರಿನಲ್ಲಿ ಮುಳುಗಿ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದರು.