ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿದು ಮಕ್ಕಳು ಕಣ್ಣು ಸುಟ್ಟುಕೊಂಡ ಘಟನೆ ನಡೆದಿದೆ.
ದೀಪಾವಳಿ ಆರಂಭ ದಿನವಾದ ನಿನ್ನೆ ಮಕ್ಕಳು ಸೇರಿ 13 ಮಂದಿ ಕಣ್ಣು ಸುಟ್ಟುಕೊಂಡು ಗಾಯಗೊಂಡಿದ್ದರೆ ಹಲವರ ಕೈಕಾಲುಗಳು ಸುಟ್ಟು ಗಾಯಗೊಳಗಾಗಿವೆ.
ಕಣ್ಣಿಗೆ ಹಾನಿ ಮಾಡಿಕೊಂಡ 11 ಮಂದಿ ಮಕ್ಕಳು ನಾರಾಯಣ ನೇತ್ರಾಲಯ, ನೇತ್ರಧಾಮ ಶೇಖರ್ ನೇತ್ರಾಲಯ, ಮಿಂಟೊ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಹದ ಭಾಗಕ್ಕೆ ಸುಟ್ಟು ಗಾಯವಾದವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಟನ್ ಪೇಟೆಯ ಭುವೇಶ್, ಎಂ ವಿ ಗಾರ್ಡನ್ ನಿವಾಸಿ ವಿಲಿಯಂ, ಜಯನಗರದ ಮೂರು ವರ್ಷದ ಬಾಲಕ ಹೇಮಂತ್ ಹಾಗೂ 14 ವರ್ಷದ ಬಾಲಕ ಅನಂತಕೃಷ್ಣ ಹಾನಿಗೊಳಗಾದವರು.