ಶಕ್ತಿ ಕೇಂದ್ರ ವಿಧಾನಸೌಧಕ್ಕೆ 60ರ ಸಂಭ್ರಮ: ವಜ್ರ ಮಹೋತ್ಸವಕ್ಕೆ ರಾಜ್ಯ ಸರ್ಕಾರ ಸಜ್ಜು

ಚರ್ಚೆ, ವಿವಾದಗಳ ನಡುವೆಯೇ ಶಕ್ತಿ ಕೇಂದ್ರ ವಿಧಾನಸೌಧದ 60ನೇ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ವಜ್ರ ಮಹೋತ್ವಸ ಆಚರಣೆ ಭಾಗವಾಗಿ ಅ.25 ರಂದು ಬೆಳಿಗ್ಗೆ 11ಕ್ಕೆ ರಾಷ್ಟ್ರಪತಿ ರಾಮನಾಥ್...
ಶಕ್ತಿ ಕೇಂದ್ರ ವಿಧಾನಸೌಧಕ್ಕೆ 60ರ ಸಂಭ್ರಮ: ವಜ್ರ ಮಹೋತ್ಸವಕ್ಕೆ ರಾಜ್ಯ ಸರ್ಕಾರ ಸಜ್ಜು
ಶಕ್ತಿ ಕೇಂದ್ರ ವಿಧಾನಸೌಧಕ್ಕೆ 60ರ ಸಂಭ್ರಮ: ವಜ್ರ ಮಹೋತ್ಸವಕ್ಕೆ ರಾಜ್ಯ ಸರ್ಕಾರ ಸಜ್ಜು
ಬೆಂಗಳೂರು: ಚರ್ಚೆ, ವಿವಾದಗಳ ನಡುವೆಯೇ ಶಕ್ತಿ ಕೇಂದ್ರ ವಿಧಾನಸೌಧದ 60ನೇ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ವಜ್ರ ಮಹೋತ್ವಸ ಆಚರಣೆ ಭಾಗವಾಗಿ ಅ.25 ರಂದು ಬೆಳಿಗ್ಗೆ 11ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿಧಾನಮಂಡಲದ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 
ಒಂದೆಡೆ ವಿಶೇಷ ಅಧಿವೇಶನಕ್ಕೆ ವಿಧಾನಸಭೆ ಸಭಾಂಗಣದಲ್ಲಿ ತಯಾರಿ ನಡೆದಿದ್ದರೆ, ಮತ್ತೊಂದೆಡೆ ವಜ್ರ ಮಹೋತ್ಸವಕ್ಕಾಗಿ ವಿಧಾನಸೌದದ ಕಟ್ಟಡ, ಬೃಹತ್ ಮೆಟ್ಟಿಲು, ಬ್ಯಾಂಕ್ವೆಟ್ ಹಾಲ್ ಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ನಡೆದಿವೆ. 
ವೆಚ್ಚ ಕಡಿತ ಹಿನ್ನಲೆಯಲ್ಲಿ ವಜ್ರ ಮಹೋತ್ಸವ ಅಂಗವಾಗಿ ಮಧ್ಯಾಹ್ನ ಊಟದ ಬಳಿಗ 3 ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶನಗೊಳ್ಳಲಿವೆ. ಟಿ.ಎನ್. ಸೀತಾರಾಮ್, ಗಿರೀಶ್ ಕಾಸರವಳ್ಳಿ ಸಿದ್ಧಪಡಿಸಿರುವ ಸಾಕ್ಷ್ಯ ಚಿತ್ರಗಳನ್ನು ಪ್ರಸಾರಗೊಳ್ಳಲಿವೆ. ಮಾಸ್ಟರ್ ಕಿಶನ್ ನಿರ್ದೇಶನದ 3ಡಿ ವರ್ಚುಯಲ್ ರಿಯಾಲಿಟಿ ವಿಡಿಯೋ ಪ್ರದರ್ಶನ ಮಧ್ಯಾಹ್ನ 3 ಗಂಟೆಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದೆ. 

ಸಂಜೆ ವೇಳೆ ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿಧಾನಸೌಧ ನಿರ್ಮಾಣಕ್ಕೆ ಪ್ರಧಾನಿ ದಿ.ಜವಾಹರಲಾಲ್ ನೆಹರು ಅವರಿಂದ ಅಡಿಗಲ್ಲು ಹಾಕಿಸಿದ ರಾಜ್ಯದ ಮೊದಲ ಮುಖ್ಯಮಂತ್ರ ಕೆ.ಸಿ.ರೆಡ್ಡಿ, ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಿದೆ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರಿಗೆ ಗೌರವಾರ್ಪಣೆ ನಡೆಯಲಿದೆ. ನಾಯಕರ ಕುಟುಂಬದವರು ಗೌರವ ಸ್ವೀಕರಿಸಲಿದ್ದಾರೆ. 
ಸಂಭ್ರಮಾಚರಣೆ ಕುರಿತು ಸಿಎಂ ಸಿದ್ದರಾಮಯ್ಯ ಅಸಮಾಧಾನ?
ವಿಧಾನಸೌಧ ಸಂಭ್ರಮಾಚರಣೆಯ ದಿನದಂದೇ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸಭೆ ಕರೆದಿದ್ದು, ಸಂಭ್ರಮಾಚರಣೆ ಕುರಿತು ಸಿದ್ದರಾಮಯ್ಯ ಅವರು ಅಸಮಾಧಾನದ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಅ.21 ರಂದು ನಡೆಯಬೇಕಿದ್ದ ಸಂಪುಟ ಸಭೆಯನ್ನು ಅ.25ಕ್ಕೆ ಮುಂದೂಡಲಾಗಿತ್ತು. 

ಇದಕ್ಕೆ ಇಂಬು ನೀಡುವಂತೆಯೇ ವಜ್ರಮಹೋತ್ಸವದಲ್ಲಿ ಪಾಲ್ಗೊಳ್ಳುವ ರಾಷ್ಟ್ರಪತಿಗಳು ಹೊರಡುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತರೆ ಕಾರ್ಯಕ್ರಮಗಳಿಗೆ ಹಾಜರಾಗಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ವಜ್ರಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಪಟ್ಟು ಹಿಡಿದು ಕುಳಿತಿದ್ದ ಕೋಳಿವಾಡ ಹಾಗೂ ಶಂಕರಮೂರ್ತಿಯವರ ಆಗ್ರಹಗಳಿಗೆ ಸೊಪ್ಪು ಹಾಕದ ಸಿದ್ದರಾಮಯ್ಯ ಅವರು ಮಹೋತ್ವಸ ಆಚರಣೆಯನ್ನು 1 ದಿನಕ್ಕೆ ಮೊಟಕುಗೊಳಿಸಿದ್ದರು. ವೆಚ್ಚವನ್ನು ರೂ.10 ಕೋಟಿಗೆ ಮಿತಿಗೊಳಿಸಿದ್ದರು. ಅಲ್ಲದೆ, ಶಾಸಕರಿಗೆ ದುಬಾರಿ ನೆನಪಿನ ಕಾಣಿಕೆ ನೀಡದಂತೆ ಸ್ಪೀಕರ್ ಹಾಗೂ ಸಭಾಪತಿಗೆ ತಾಕೀತು ಮಾಡಿದ್ದರು. 

ಸ್ಪೀಕರ್ ಹಾಗೂ ಸಭಾಪತಿಯವರ ಒತ್ತಾಸೆಯ ಮೇರೆಗೆ ವಜ್ರಮಹೋತ್ಸವದ ಖರ್ಜು ವೆಚ್ಚವನ್ನು ರೂ.26 ಕೋಟಿ ಎಂದು ತೋರಿಸಿದ ಸಚಿವಾಲಯದ ಪ್ರಸ್ತಾವನೆಗೆ ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿ ರೂ.10 ಕೋಟಿ ಗೆ ವೆಚ್ಚ ಕಡಿತಗೊಳಿಸುವಂತೆ ಸೂಚನೆ ನೀಡಿತ್ತು. ಈ ಕಡತ ಅಂತಿಮವಾಗಿ ಮುಖ್ಯಮಂತ್ರಿಗಳ ಅವಗಾಹನೆ ಬಂದಿತ್ತು. ಆದರೂ, ಪಟ್ಟು ಬಿಡದ ಸ್ಪೀಕರ್ ಹಾಗೂ ಸಭಾಪತಿಗಳು ನಿನ್ನೆ ಬೆಳಿಗ್ಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ತೆರಳಿ ಉದ್ದೇಶಿತ ವೆಚ್ಚಕ್ಕೆ ಅನುಮೋದನೆ ನೀಡುವಂತೆ ಪಟ್ಟು ಹಿಡಿದಿದ್ದರು. 

ಇದಕ್ಕೆ ಸೊಪ್ಪು ಹಾಕದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅತಿವೃಷ್ಟಿಯಿದ್ದು, ಅನೇಕ ಕಡೆಗಳಲ್ಲಿ ಬರಗಾಲ ಇದೆ. ಇಂತಹ ಸಂದರ್ಭದಲ್ಲಿ ಕೋಟ್ಯಾಂತರ ಹಣವನ್ನು ಎರಡು ದಿನಗಳ ಕಾರ್ಯಕ್ರಮಕ್ಕೆ ವೆಚ್ಚ ಮಾಡುವುದು ಸರಿಯಲ್ಲ. ಅದರಲ್ಲೂ ಶಾಸಕರಿಗೆ ಚಿನ್ನದ ಬಿಸ್ಕತ್ತು, ಸಿಬ್ಬಂದಿಗೆ ಬೆಳ್ಳಿ ತಟ್ಟೆ ಇತ್ಯಾದಿ ದುಬಾರಿ ಕಾಣಿಕೆ ನೀಡಲು ಮುಂದಾದರೆ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಪ್ರತಿಪಕ್ಷಗಳಿಗೂ ಅಸ್ತ್ರ ಸಿಕ್ಕಂತಾಗುತ್ತದೆ. ಸರ್ಕಾರವನ್ನು ಟೀಕಿಸಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com