ಸಂಭ್ರಮಾಚರಣೆ ಕುರಿತು ಸಿಎಂ ಸಿದ್ದರಾಮಯ್ಯ ಅಸಮಾಧಾನ?
ವಿಧಾನಸೌಧ ಸಂಭ್ರಮಾಚರಣೆಯ ದಿನದಂದೇ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸಭೆ ಕರೆದಿದ್ದು, ಸಂಭ್ರಮಾಚರಣೆ ಕುರಿತು ಸಿದ್ದರಾಮಯ್ಯ ಅವರು ಅಸಮಾಧಾನದ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಅ.21 ರಂದು ನಡೆಯಬೇಕಿದ್ದ ಸಂಪುಟ ಸಭೆಯನ್ನು ಅ.25ಕ್ಕೆ ಮುಂದೂಡಲಾಗಿತ್ತು.
ಇದಕ್ಕೆ ಇಂಬು ನೀಡುವಂತೆಯೇ ವಜ್ರಮಹೋತ್ಸವದಲ್ಲಿ ಪಾಲ್ಗೊಳ್ಳುವ ರಾಷ್ಟ್ರಪತಿಗಳು ಹೊರಡುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತರೆ ಕಾರ್ಯಕ್ರಮಗಳಿಗೆ ಹಾಜರಾಗಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ವಜ್ರಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಪಟ್ಟು ಹಿಡಿದು ಕುಳಿತಿದ್ದ ಕೋಳಿವಾಡ ಹಾಗೂ ಶಂಕರಮೂರ್ತಿಯವರ ಆಗ್ರಹಗಳಿಗೆ ಸೊಪ್ಪು ಹಾಕದ ಸಿದ್ದರಾಮಯ್ಯ ಅವರು ಮಹೋತ್ವಸ ಆಚರಣೆಯನ್ನು 1 ದಿನಕ್ಕೆ ಮೊಟಕುಗೊಳಿಸಿದ್ದರು. ವೆಚ್ಚವನ್ನು ರೂ.10 ಕೋಟಿಗೆ ಮಿತಿಗೊಳಿಸಿದ್ದರು. ಅಲ್ಲದೆ, ಶಾಸಕರಿಗೆ ದುಬಾರಿ ನೆನಪಿನ ಕಾಣಿಕೆ ನೀಡದಂತೆ ಸ್ಪೀಕರ್ ಹಾಗೂ ಸಭಾಪತಿಗೆ ತಾಕೀತು ಮಾಡಿದ್ದರು.
ಸ್ಪೀಕರ್ ಹಾಗೂ ಸಭಾಪತಿಯವರ ಒತ್ತಾಸೆಯ ಮೇರೆಗೆ ವಜ್ರಮಹೋತ್ಸವದ ಖರ್ಜು ವೆಚ್ಚವನ್ನು ರೂ.26 ಕೋಟಿ ಎಂದು ತೋರಿಸಿದ ಸಚಿವಾಲಯದ ಪ್ರಸ್ತಾವನೆಗೆ ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿ ರೂ.10 ಕೋಟಿ ಗೆ ವೆಚ್ಚ ಕಡಿತಗೊಳಿಸುವಂತೆ ಸೂಚನೆ ನೀಡಿತ್ತು. ಈ ಕಡತ ಅಂತಿಮವಾಗಿ ಮುಖ್ಯಮಂತ್ರಿಗಳ ಅವಗಾಹನೆ ಬಂದಿತ್ತು. ಆದರೂ, ಪಟ್ಟು ಬಿಡದ ಸ್ಪೀಕರ್ ಹಾಗೂ ಸಭಾಪತಿಗಳು ನಿನ್ನೆ ಬೆಳಿಗ್ಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ತೆರಳಿ ಉದ್ದೇಶಿತ ವೆಚ್ಚಕ್ಕೆ ಅನುಮೋದನೆ ನೀಡುವಂತೆ ಪಟ್ಟು ಹಿಡಿದಿದ್ದರು.
ಇದಕ್ಕೆ ಸೊಪ್ಪು ಹಾಕದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅತಿವೃಷ್ಟಿಯಿದ್ದು, ಅನೇಕ ಕಡೆಗಳಲ್ಲಿ ಬರಗಾಲ ಇದೆ. ಇಂತಹ ಸಂದರ್ಭದಲ್ಲಿ ಕೋಟ್ಯಾಂತರ ಹಣವನ್ನು ಎರಡು ದಿನಗಳ ಕಾರ್ಯಕ್ರಮಕ್ಕೆ ವೆಚ್ಚ ಮಾಡುವುದು ಸರಿಯಲ್ಲ. ಅದರಲ್ಲೂ ಶಾಸಕರಿಗೆ ಚಿನ್ನದ ಬಿಸ್ಕತ್ತು, ಸಿಬ್ಬಂದಿಗೆ ಬೆಳ್ಳಿ ತಟ್ಟೆ ಇತ್ಯಾದಿ ದುಬಾರಿ ಕಾಣಿಕೆ ನೀಡಲು ಮುಂದಾದರೆ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಪ್ರತಿಪಕ್ಷಗಳಿಗೂ ಅಸ್ತ್ರ ಸಿಕ್ಕಂತಾಗುತ್ತದೆ. ಸರ್ಕಾರವನ್ನು ಟೀಕಿಸಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದ್ದರು.