ಬೆಂಗಳೂರಿನ ಪೆಟ್ರೋಲ್ ಬಂಕ್ ನೂತನ ಪ್ರಯೋಗ: ಇಂಧನ ಹಾಕಿಸಿಕೊಳ್ಳುವವರಿಗೆ ಉಚಿತ ಊಟ, ತಿಂಡಿ

ಇಂದಿರಾ ನಗರದ ಪೆಟ್ರೋಲ್ ಬಂಕ್ ತನ್ನ ಬಂಕ್ ನಲ್ಲಿ ಇಂಧನ ಹಾಕಿಸಿಕೊಳ್ಳುವವರಿಗೆ ಕಾಫಿ, ತಿಂಡಿ, ಊಟ ನೀಡುವ ಹೊಸ ಯೋಜನೆ ಜಾರಿಗೆ ತಂದಿದೆ. ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಇಂದಿರಾ ನಗರದ ಪೆಟ್ರೋಲ್ ಬಂಕ್ ತನ್ನ ಬಂಕ್ ನಲ್ಲಿ ಇಂಧನ ಹಾಕಿಸಿಕೊಳ್ಳುವವರಿಗೆ ಕಾಫಿ, ತಿಂಡಿ, ಊಟ ನೀಡುವ ಹೊಸ ಯೋಜನೆ ಜಾರಿಗೆ ತಂದಿದೆ. ಇದು ದೇಶದಲ್ಲೇ ಮೊದಲ ಪ್ರಯೋಗವಾಗಿದೆ.
ಇಂದಿರಾನಗರದ ಹಳೇ ಮದ್ರಾಸ್‌ ರಸ್ತೆಯ ವೆಂಕಟೇಶ್ವರ್ ಸರ್ವೀಸ್‌ ಸ್ಟೇಷನ್‌ ಪೆಟ್ರೋಲ್‌ ಬಂಕ್‌ನಲ್ಲಿ ವಾಹನಗಳಿಗೆ ತೈಲ ಹಾಕಿಸಿಕೊಳ್ಳುವ ಗ್ರಾಹಕರಿಗೆ ಉಚಿತವಾಗಿ ತಿಂಡಿ ಹಾಗೂ ಊಟ ನೀಡಲು ಮಾಲೀಕರು ತೀರ್ಮಾನಿಸಿದ್ದಾರೆ. 
ಈ ಪೆಟ್ರೋಲ್ ಬಂಕ್‍ನಲ್ಲಿ ಇಂಧನ ಭರಿಸುವವರಿಗೆ ಅವರು ಭರಿಸುವ ಇಂಧನದ ಮೊತ್ತ ಆಧರಿಸಿ ಒಂದು ತಿಂಡಿ ಅಥವಾ ಊಟ ನೀಡಲಾಗುತ್ತದೆ. 300 ರೂ. ಇಂಧನಕ್ಕೆ ಚಹಾ, ಕಾಫಿ, ಸಮೋಸಾ, 750 ರೂ.ಗೆ ವೆಜ್ ಅಥವಾ ಎಗ್ ಪಫ್ ನೀಡಲಾಗುತ್ತಿದೆ. 2000 ರೂ.ಗಿಂತ ಹೆಚ್ಚಿನ ಮೊತ್ತದ ಇಂಧನ ಭರಿಸಿಕೊಂಡರೆ ವೆಜ್ ಅಥವಾ ಚಿಕನ್ ಬಿರ್ಯಾನಿ ನೀಡಲಾಗುತ್ತಿದೆ. ಇದೇ ರೀತಿ 1000, 1500 ಇತ್ಯಾದಿ ಮೊತ್ತಕ್ಕೂ ತಿಂಡಿ ನೀಡಲಾಗುತ್ತದೆ. ಇದಕ್ಕಾಗಿ ಕೇಂದ್ರೀಕೃತ ಅಡುಗೆ ಮನೆ ಸಿದ್ಧಪಡಿಸಿಕೊಂಡಿದ್ದು, ಅಲ್ಲಿ ಹೈಜಿನ್ ಆಗಿ ಆಹಾರ ಸಿದ್ಧವಾಗಿ ಕ್ವಿಕ್ಕೀಸ್‍ಗೆ ರವಾನೆ ಆಗುತ್ತದೆ. 
ಇಂದಿನ ಸಂಚಾರ ದಟ್ಟಣೆ ಹಾಗೂ ಒತ್ತಡದ ಜೀವನದಲ್ಲಿ ಬಹುಪಾಲು ಜನಕ್ಕೆ ತಿಂಡಿ ಹಾಗೂ ಊಟಕ್ಕೆ ಸಮಯವೇ ಸಿಗುತ್ತಿಲ್ಲ. ಪೆಟ್ರೋಲ್‌ ಹಾಕಿಸಿಕೊಳ್ಳಲು ನಮ್ಮ ಬಂಕ್‌ಗೆ ನಿತ್ಯವೂ 5 ಸಾವಿರಕ್ಕೂ ಹೆಚ್ಚು ಜನ ಬರುತ್ತಾರೆ. ಅವರಲ್ಲಿ ಬಹುಪಾಲು ಗ್ರಾಹಕರು ತಿಂಡಿ ಹಾಗೂ ಊಟ ಆಗಿಲ್ಲ ಎಂದೇ ಹೇಳುತ್ತಾರೆ. ಈಗ ಜಾರಿಗೆ ತರುತ್ತಿರುವ ವ್ಯವಸ್ಥೆಯಿಂದ ಅವರೆಲ್ಲರಿಗೂ ಅನುಕೂಲವಾಗಲಿದೆ ಎಂಬುದು ಮಾಲೀಕರ ಅಭಿಪ್ರಾಯ.
ಪೆಟ್ರೋಲ್‌ ಹಾಗೂ ಡೀಸೆಲ್‌ ತುಂಬಿಸಿಕೊಳ್ಳಲು ಗ್ರಾಹಕರು ಬಂಕ್‌ಗೆ ಬರುತ್ತಿದ್ದಂತೆ, ಅವರು ಎಷ್ಟು ಮೌಲ್ಯದ ತೈಲ ಖರೀದಿಸುತ್ತಾರೆ ಎಂಬುದನ್ನು ನಮ್ಮ ಪ್ರತಿನಿಧಿ ತಿಳಿದುಕೊಳ್ಳುತ್ತಾರೆ. ಬಳಿಕ ವಾಹನಕ್ಕೆ ತೈಲ ತುಂಬಿಸುತ್ತಲೇ ತಿಂಡಿ ಅಥವಾ ಊಟಕ್ಕೆ ಆರ್ಡರ್‌ ನೀಡುತ್ತಾರೆ. ಅದಾದ ನಿಮಿಷದಲ್ಲಿ ತಿಂಡಿ ಅಥವಾ ಊಟದ ಪಾರ್ಸಲ್‌ ಗ್ರಾಹಕರ ಕೈ ಸೇರಲಿದೆ. ಅವರು ಅದನ್ನು ಬಂಕ್‌ನಲ್ಲೇ ತಿನ್ನಬಹುದು. ಅವರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಬಂಕ್‌ನಲ್ಲಿ ಮಾಡಲಿದ್ದೇವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com