ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಮಲ್ಲನಗೌಡ ಬಿರಾದಾರ್ (22) ಎಂಬಾತನನ್ನು ಸೈಬರ್ ಕ್ರೈಂ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಯಾದಗಿರಿ ಜಿಲ್ಲೆಯ ನಾರಾಯಣಪುರದ ಮಲ್ಲಿ ಅರ್ಜುನ್ ಬಂಧಿಸಿರುವ ಪೊಲೀಸರು ಆತನ ಮೊಬೈಲ್ ಫೋನ್ ಮತ್ತು 2 ಸಿಮ್ ಕಾರ್ಡ್ ಗಳನ್ನ ವಶ ಪಡಿಸಿಕೊಂಡು ಯಾವೂದಾದರೂ ಸಂಘಟನೆಯೊಂದಿಗೆ ಆತನಿಗೆ ಸಂಪರ್ಕವಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಡಿಪ್ಲಮಾ ಪದವೀದರನಾಗಿರುವ ಮಲ್ಲಿ ಅರ್ಜುನ್ ಕೆಲಸ ಹುಡುಕಿಕೊಂಡು ಎರಡು ತಿಂಗಳ ಹಿಂದೆ ನಗರಕ್ಕೆ ಬಂದು ವಿಜಯನಗರದ ಸ್ನೇಹಿತರೊಬ್ಬರ ಮನೆಯಲ್ಲಿ ವಾಸವಿದ್ದರು.
ಗೌರಿ ಹತ್ಯೆಯಾದ ದಿನದಂದು ಆರೋಪಿಯು ‘ಮಲ್ಲಿ ಅರ್ಜುನ್’ ಎಂಬ ಫೇಸ್ಬುಕ್ ಖಾತೆಯಲ್ಲಿ ತಾಳ್ಮೆಗೂ ಒಂದು ಮಿತಿ ಇದೆ...ಒಂದು ಗಂಜಿ ಗಿರಾಕಿ ಹೆಣ ಬಿತ್ತು...ಗೌರಿ ಲಂಕೇಶ್ ಮಟ್ಯಾಶ್" ಧರ್ಮಕ್ಕಾಗಿ ಜೀವ ಕೊಡಬೇಕು ಅಂತೇನಿಲ್ಲ. ಧರ್ಮದ ವಿರುದ್ಧವಾದವರ ಜೀವ ತೆಗೆದರೆ ಆಯ್ತು’ ಎಂದು ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಖಾತೆದಾರ ಮಲ್ಲಿ ಅರ್ಜುನ್ ಕ್ಷಮೆ ಯಾಚಿಸಿದ್ದರು.
ಹಿಂದೆ ಹಾಕಿರೋ ಪೋಸ್ಟ್ ನಿಂದ ಯಾರಿಗಾದ್ರೂ ಬೇಜಾರಾಗಿದ್ರೆ ದಯವಿಟ್ಟು ಕ್ಷಮೆಯಿರಲಿ ಎಂಬ ಪೋಸ್ಟ್ ಹಾಕಿದ್ದರು.
ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ 1ನೇ ಎಸಿಎಂಎಂ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯನ್ನು 3 ದಿನಗಳವರೆಗೆ ಪೊಲೀಸರ ವಶಕ್ಕೆ ನೀಡಿದ್ದಾರೆ.