ಬೆಂಗಳೂರು: ವಿಧಾನಸೌಧ ಹಾಗೂ ನೆಹರು ತಾರಾಲಯಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸರು ಮೂವರು ಆರೋಪಿಗಳನ್ನು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧತರನ್ನು ಸುರೇಶ್, ನಾಗರಾಜ್ ಮತ್ತು ಶ್ರೀಧರ್ ಎಂದು ಗುರ್ತಿಸಲಾಗಿದೆ. ನಿನ್ನೆ ಮಧ್ಯಾಹ್ನ ಅನಾಮಧೇಯ ವ್ಯಕ್ತಿಗಳು ನಮ್ಮ-100ಕ್ಕೆ ಕರೆ ಮಾಡಿ ಶಕ್ತಿ ಕೇಂದ್ರ ವಿಧಾನಸೌಧ ಹಾಗೂ ನೆಹರು ತಾರಾಲಯಕ್ಕೆ ಬಾಂಬ್ ಬೆದರಿಕೆ ಹಾಕಿದ್ದರು.
ಬಾಂಬ್ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಕೆಲ ಕಾಲ ಸ್ಥಳದಲ್ಲಿ ಆಂತಕದ ವಾತಾವರಣ ಸೃಷ್ಟಿಯಾಗಿತ್ತು. ಬೆದರಿಕೆ ಕರೆ ಹಿನ್ನಲೆಯಲ್ಲಿ ವಿಧಾನಸೌಧ ಮತ್ತು ನೆಹರು ತಾರಾಲಯದಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸಿಬ್ಬಂದಿ ತೀವ್ರ ತಪಾಸಣೆ ನಡೆಸಿದ ನಂತರ ಅದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ಖಚಿತವಾಗಿತ್ತು.
ಪ್ರಕರಣ ಸಂಬಂಧ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇದೀಗ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ನಿಯಂತ್ರಣ ಕೊಠಡಿಗೆ ಕರೆ ಸುರೇಶ್ ಎಂಬ ವ್ಯಕ್ತಿ ಕರೆ ಮಾಡಿದ್ದಾನೆ. ಈ ವೇಳೆ ನಾಗರಾಜ್ ಎಂಬ ವ್ಯಕ್ತಿ ಸೆ.25ರೊಳಗೆ ವಿಧಾನಸೌಧ ಮತ್ತು ನೆಹರು ತಾರಾಲಯದಲ್ಲಿ ಬಾಂಬ್ ಇಡಲಿದ್ದಾನೆ. ಇದನ್ನು ತಡೆಯಿರಿ ಎಂದು ಹೇಳಇದ್ದಾರೆ. ನಿಯಂತ್ರಣ ಕೊಠಡಿ ಸಿಬ್ಬಂದಿ ಮರು ಪ್ರಶ್ನೆ ಹಾಕುವಷ್ಟರಲ್ಲಿ ಕಾಲ್ ಕಟ್ ಮಾಡಿದ್ದ.