ಬೆಂಗಳೂರು: ಮುಂದಿನ 10 ದಿನಗಳೊಳಗೆ ನಗರದ ರಸ್ತೆಯಲ್ಲಿರುವ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಎಂ. ಮಂಜುನಾಥ್ ಪ್ರಸಾದ್ ಗಡುವು ನೀಡಿದ್ದಾರೆ.
ತಾವು ನೀಡಿರುವ ಗಡುವಿನಲ್ಲಿ ಗುಂಡಿಗಳನ್ನ ಮುಚ್ಚಲು ರಾತ್ರಿ 10 ಗಂಟೆಯಿಂದ ಬೆಳಗ್ಗಿನ ಜಾವ 3 ಗಂಟೆ ವರೆಗೂ ಕಾಮಗಾರಿ ನಡೆಸಲು ಸೂಚಿಸಿದ್ದಾರೆ. ಈ ವೇಳೆ ನಗರದ ರಸ್ತೆಗಳಲ್ಲಿ ಸಂಚಾರ ಕಡಿಮೆ ಇರುತ್ತದೆ.
ಗುಂಡಿಗಳನ್ನು ಮುಚ್ಚುವದಷ್ಟೇ ಅಧಿಕಾರಿಗಳ ಕೆಲಸವಲ್ಲ, ಒಮ್ಮೆ ರಿಪೇರಿಯಾದ ರಸ್ತೆಗಳ ಫೋಟೋ ತೆಗೆದು ಜಿಪಿಎಸ್ ಇರುವ ಮೊಬೈಲ್ ನಿಂದ ಆಯುಕ್ತರಿಗೆ ರವಾನಿಸಬೇಕಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ತೀರಾ ಹದಗೆಟ್ಟು ಪ್ರಯಾಣಿಕರ ಪಾಲಿಗೆ ನರಕದಂತಾಗಿವೆ.
ಕೇವಲ ಕಳಪೆ ಗುಣಮಟ್ಟದಿಂದ ಮಾತ್ರ ರಸ್ತೆಗಳಲ್ಲಿ ಗುಂಡಿಗಳಾಗಿಲ್ಲ, ಹಲವು ಎಜೆನ್ಸಿಗಳು ರಸ್ತೆ ಅಗೆದಿರುವುದು ಕಾರಣವಾಗಿದೆ, ಆದರೆ ಆಂತಿಮವಾಗಿ ನಾವು ನಾಗರಿಕರ ಆಕ್ರೋಶಕ್ಕೆ ಗುರಿಯಾಗುತ್ತೇವೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.