ಬೆಂಗಳೂರು :ನಗರದಲ್ಲಿನ ತ್ಯಾಜ್ಯವನ್ನು ಸುರಿಯುತ್ತಿರುವ ಕ್ವಾರಿ ಹೊಂಡಗಳಿಂದ ಅನಿಲ ಹೊರಸೂಸುವಿಕೆಗೆ ಕ್ರಮ ಕೈಗೊಳದಿದ್ದಲ್ಲಿ ಮತ್ತೊಂದು ಭೂಪಾಲ್ ದುರಂತ ಸಂಭವಿಸಿ ಸಾವಿರಾರು ಜನರು ಪ್ರಾಣಕಳೆದುಕೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ಏಳು ಘನ ತ್ಯಾಜ್ಯ ಸಂಸ್ಕರಣಾ ಘಟಕಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. 350 ಕೋಟಿ ರೂ ವೆಚ್ಚದಲ್ಲಿ 18 ತಿಂಗಳ ಹಿಂದೆಯೇ ಇವುಗಳನ್ನು ಸ್ಥಾಪಿಸಿದ್ದರೂ ಅವುಗಳು ಕಾರ್ಯನಿರ್ವಹಿಸುತ್ತಿಲ್ಲ.
ಕ್ವಾರಿ ಹೊಂಡಗಳಲ್ಲಿ ಬಾಂಬ್ ರೀತಿಯ ಅನಿಲ ಉತ್ಪತ್ತಿ ಕುರಿತು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಎಸ್. ಪಾಟೀಲ್ ಮತ್ತು ಬಿ. ವಿ. ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠ, ಬೆಳ್ಳಂದೂರು ಕೆರೆ ರೀತಿಯಲ್ಲಿ ಕ್ವಾರಿಯಲ್ಲಿನ ಬೆಂಕಿ ಕಾಣಿಸಿಕೊಂಡಿರುವುದು ಮತ್ತೊಂದು ಭೂಪಾಲ್ ದುರಂತದ ಸಾಧ್ಯತೆಯಂತಿದ್ದು. ಇದನ್ನು ನಿಯಂತ್ರಿಸದಿದ್ದರೆ ಸಾವಿರಾರು ಜನರ ಪ್ರಾಣಕ್ಕೆ ಕುತ್ತು ಬರಲಿದೆ ಎಂದು ಹೇಳಿತು.
ಕಾಲಕಾಲಕ್ಕೆ ತಕ್ಕಂತೆ ತನ್ನ ನಿರ್ದೇಶನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಎಲ್ಲಾ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿತ್ತು.
ವಾರ್ಡ್ ವ್ಯಾಪ್ತಿಯೊಳಗೆ ತ್ಯಾಜ್ಯ ಉತ್ಪತ್ತಿ ಬಗ್ಗೆ ಸಭೆ ನಡೆಯುತ್ತಿಲ್ಲ, ವಾರ್ಡ್ ಸಮಿತಿಯ ವಿವರ ನೀಡಿ ಎಂದು ಬಿಬಿಎಂಪಿಯನ್ನು ಕೇಳಿದ ಹೈಕೋರ್ಟ್, ಶುಕ್ರವಾರದೊಳಗೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿತ್ತು.
ಘನ ತ್ಯಾಜ್ಯ ನಿರ್ವಹಣಾ ಘಟಕಗಳ ಬಗ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಸಕ್ತಿ ಸಂಬಂಧದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.
ಪ್ರತಿಯೊಂದು ವಾರ್ಡ್ ನಲ್ಲಿಯೂ ಘನ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈ ಸಂಬಂಧ ವಾರ್ಡ್ ಸಮಿತಿಗೆ ಸೂಕ್ತ ಆದೇಶ ನೀಡಲಾಗಿದೆ ಎಂದು
ಬಿಬಿಎಂಪಿ ಆಯುಕ್ತರು ಹೈಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಹೇಳಿದ್ದಾರೆ.
ಘನ ತ್ಯಾಜ್ಯ ನಿರ್ವಹಣಾ ಘಟಕದ ಜಾಗ ಗುರುತಿಸಿದ ನಂತರ ನಾಲ್ಕು ವಾರ್ಡ್ ಗಳಿಗೆ ಈಗಾಗಲೇ ಕೆಲಸದ ಆದೇಶ ನೀಡಲಾಗಿದೆ. 5 ನೇ ವಾರ್ಡ್ ನಲ್ಲಿ ಕೆಲಸ ಪ್ರಗತಿಯಲ್ಲಿದೆ. ಇತರ ವಾರ್ಡ್ ಗಳಲ್ಲಿ ಯಾವುದೇ ರೀತಿಯ ಕೆಲಸಗಳು ನಡೆಯುತ್ತಿಲ್ಲ ವಾರ್ಡ್ ಸಮಿತಿಗೆ ಸೂಕ್ತ ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement