ಸಾಂದರ್ಭಿಕ ಚಿತ್ರ
ರಾಜ್ಯ
ಬೆಂಗಳೂರು: ದಂಡ ಕಟ್ಟಲು ಹೇಳಿದ ಟಿಟಿಇಯನ್ನು ರೈಲಿಂದ ಹೊರ ತಳ್ಳಿದ ಪ್ರಯಾಣಿಕರು
ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಳಿ ದಂಡ ಕಟ್ಟಲು ಹೇಳಿದ್ದ ಟಿಟಿಇ ಒಬ್ಬನನ್ನು ಚಲಿಸುವ ರೈಲಿನಿಂದಲೇ ಹೊರ ಹಾಕಿದ ಘಟನೆ........
ಬೆಂಗಳೂರು: ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಳಿ ದಂಡ ಕಟ್ಟಲು ಹೇಳಿದ್ದ ಟಿಟಿಇ ಒಬ್ಬನನ್ನು ಚಲಿಸುವ ರೈಲಿನಿಂದಲೇ ಹೊರ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯಶವಂತಪುರ-ಹೌರಾ ಎಕ್ಸ್ ಪ್ರೆಸ್ (ಟ್ರೈನ್ ನಂ 12864) ನಲ್ಲಿ ಈ ಘಟನೆ ಸಂಭವಿಸಿದ್ದು 6 ಮಂದಿ ಪ್ರಯಾಣಿಕರ ತಂಡ ಈ ಕೃತ್ಯ ಎಸಗಿದೆ.
ಗುರುವಾರ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಟಿಟಿಇ ವಿ. ಸಂತೋಷ್ ಕುಮಾರ್ ಗಾಯಗೊಂಡಿದ್ದಾರೆ. ರೈಲು ನಿಧಾನಗತಿಯಲ್ಲಿ ಚಲಿಸುತ್ತಿದ್ದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಶವಂತಪುರ ಹಾಗೂ ಜೋಲಾರ್ಪಟ್ಟೈ ನಡುವೆ ಈ ಘಟನೆ ನಡೆದಿದೆ. ಟಿಟಿಇ ಸಂತೋಷ್ ತಾವು ಪ್ರಯಾಣಿಕರ ಟಿಕೆಟ್ ಪರೀಕ್ಷಿಸುತ್ತಿದ್ದಾಗ ಆರು ಪ್ರಯಾಣಿಕರಲ್ಲಿ ಇಬ್ಬರು ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದದ್ದು ಪತ್ತೆ ಮಾಡಿದ್ದಾರೆ. ಟಿಕೆಟ್ ರಹಿತ ಪ್ರಯಾಣಿಕರನ್ನು ದಂಡ ಪಾವತಿಸಲು ಕೇಳಿದ ಸಂತೋಷ್ ಅವರ ಮಾತಿಗೆ ಪ್ರಯಾಣಿಕರು ತಾವು ದಂಡ ಪಾವತಿಸಲು ನಿರಾಕರಿಸಿದ್ದಾರೆ.
ಜೋಲಾರ್ಪಟ್ಟೈ ಗೆ ರೈಲು ತಲುಪಲು ಸಂತೋಷ್ ಅಲ್ಲಿನ ರೈಲ್ವೆ ರಕ್ಷಣಾ ಪಡೆಗೆ ಈ ಮಾಹಿತಿ ನೀಡಿದ್ದಾರೆ. ಅವರು ಇಬ್ಬರು ಪ್ರಯಾಣಿಕರು ದಂಡ ಪಾವತಿಸಲು ಆದೇಶಿಸಿದ್ದಾರೆ. ಇದಾಗಿ ಮತ್ತೆ ಸಂತೋಷ್ ಆ ಪ್ರಯಾಣಿಕರ ಬಳಿ ಸಾರಿ ದಂಡ ಪಾವತಿಸುವಂತೆ ಕೇಳಿದ್ದಾರೆ.
ಆಗ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದ ಪ್ರಯಾಣಿಕರು ಅವರ ಶರ್ಟ್ ಹರಿದು ಹಾಕಿದ್ದು ಅವರ ಬಳಿ ಇದ್ದ ಮೀಸಲಾತಿ ಚಾರ್ಟ್, ರೈಲ್ವೆ ನಗದು ಮತ್ತು ಮೊಬೈಲ್ ಫೋನ್ ಗಳನ್ನು ಕಿತ್ತುಕೊಂಡಿದ್ದಾರೆ. ಬಳಿಕ ಸಂತೋಷ ಅವರನ್ನು ಚಲಿಸುವ ರೈಲಿನಿಂದ ಹೊರ ತಳ್ಳಲಾಗಿದೆ.
ತಮಿಳು ನಾಡು ಕಾಟಪಾಡಿ ರೈಲ್ವೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದಾಗಲೇ ಪೋಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು ಉಳಿದ ಐವರು ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ