ಬೆಂಗಳೂರು : ಎಂಜಿನಿಯರಿಂಗ್ ಮತ್ತಿತರ ವೃತ್ತಿ ಶಿಕ್ಷಣ ಕೋರ್ಸ್ ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ಕೆಲ ವಿಷಯಗಳ ಪತ್ರಿಕೆಗಳಲ್ಲಿ ತಪ್ಪುಗಳನ್ನು ತಜ್ಞರು ಕಂಡುಹಿಡಿದಿದ್ದಾರೆ.
ಜೀವಶಾಸ್ತ್ರ, ಗಣಿತಶಾಸ್ತ್ರದ ನಂತರ ನಿನ್ನೆ ನಡೆದ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆಯಲ್ಲೂ ಎರಡು ತಪ್ಪು ಪ್ರಶ್ನೆಯನ್ನು ತಜ್ಞರು ಪತ್ತೆ ಹಚ್ಚಿದ್ದಾರೆ. ಆದಾಗ್ಯೂ, ಈ ಸಂಬಂಧ ವಿದ್ಯಾರ್ಥಿಗಳು ಯಾವುದೇ ಆಕ್ಷೇಪ ಎತ್ತಿಲ್ಲ.
ಎನ್ ಸಿ ಇ ಆರ್ ಟಿ ಪಠ್ಯಕ್ರಮದಂತೆ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆ ನಂ-9 ಎಫ್ ಆವೃತ್ತಿಯನ್ನು ಒಪ್ಪಲು ಸಾಧ್ಯವಿಲ್ಲ . ಪ್ರಶ್ನೆ ಸಂಖ್ಯೆ 49ರ ಎಫ್ ಆವೃತ್ತಿಯೂ ಸರಿಯಾಗಿ ಹೊಂದಾಣಿಕೆಯಾಗುವುದಿಲ್ಲ ಎಂದು ಕಾಲೇಜೊಂದರ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋಫೆಸರ್ ಸಂದೀಪ್ ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಪರಿಶೀಲನೆ ನಡೆಸಲು ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು ನಂತರ ಪರಿಹಾರ ಅಂಕ ನೀಡಲು ತೀರ್ಮಾನಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಎರಡು ದಿನಗಳ ನಂತರ ಕೀ ಅಂಕಗಳನ್ನು ಪ್ರಕಟಿಸಲಾಗುವುದು, ಆಕ್ಷೇಪಣೆಗಳಿದ್ದಲ್ಲಿ ವಿದ್ಯಾರ್ಥಿಗಳು ಸಲ್ಲಿಸಬಹುದು, ಎಲ್ಲಾ ಆಕ್ಷೇಪಣೆಗಳನ್ನು ತಜ್ಞರ ಸಮಿತಿಗೆ ಕಳುಹಿಸಲಾಗುವುದು, ನಂತರ ತಜ್ಞರ ಸಮಿತಿ ಪರಿಹಾರ ಅಂಕ ನೀಡುವ ಸಂಬಂಧ ತೀರ್ಮಾನ ಕೈಗೊಳ್ಳಲಿದೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.
ಏ. 18 ರಂದು ಜೀವಶಾಸ್ತ್ರ ಮತ್ತು ಗಣಿತಶಾಸ್ತ್ರ ಹಾಗೂ ಏ.19 ರಂದು ರಸಾಯನಶಾಸ್ತ್ರ ವಿಷಯದ ಬಗ್ಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆದಿತ್ತು.
Advertisement