ಬೆಂಗಳೂರು: ನಮ್ಮ ಮೆಟ್ರೋ ರೈಲು ಮಾರ್ಗದ ರಾಜಾಜಿನಗರ ಬಳಿ ಭಾನುವಾರ ಬೆಳಿಗ್ಗೆ ಅಪಾಯಕಾರಿ ಘಟನೆ ಸಂಭವಿಸಿದೆ. ಮಧ್ಯದಾರಿಯಲ್ಲಿ ಪ್ರಯಾಣಿರಿದ್ದ ಮೆಟ್ರೋ ರೈಲಿನ ಮೂರು ಬೋಗಿಗಳ ಬಾಗಿಲುಗಳು ಇದ್ದಕಿದ್ದಂತೆ ಬಂದ್ ಆಗಿದ್ದು, ಕೆಲಕಾಲ ಆತಂಕದ ವಾತವಾರಣ ಸೃಷ್ಠಿಯಾಯಿತು.
ಬಾಗಿಲುಗಳು ಬಂದ್ ಆಗಿದ್ದರಿಂದ ತುರ್ತು ಪರಿಸ್ಥಿತಿಗಾಗಿ ನಿಯೋಜಿತವಾದ ಕ್ಯಾಬಿನ್ ನಿಂದ ಹೊರಬಂದ ಲೊಕೊ ಪೈಲೆಟ್ ಮಧ್ಯದಾರಿಯಲ್ಲಿ ರೈಲನ್ನು ನಿಲ್ಲಿಸಿದ್ದಾರೆ.
ನಾಗಸಂದ್ರದಿಂದ ಯಲಚೇನಹಳ್ಳಿ ನಡುವಿನ ಹಸಿರು ಮಾರ್ಗದಲ್ಲಿ ಬೆಳಿಗ್ಗೆ 11 -16ರ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ. ರಾಜಾಜಿನಗರದಿಂದ ನಿರ್ಗಮಿಸಿದ ರೈಲು ಮಹಾಕವಿ ಕುವೆಂಪು ಮೆಟ್ರೋ ನಿಲ್ದಾಣ ಕಡೆಗೆ ಹೋಗುತ್ತಿದ್ದಾಗ ನವರಂಗ್ ಥಿಯೇಟರ್ ಬಳಿಯ ತಿರುವಿನಲ್ಲಿ ಇದು ನಡೆದಿದೆ.100 ಪ್ರಯಾಣಿಕರು ರೈಲಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.
ಬಾಗಿಲುಗಳು ಇದ್ದಕ್ಕಿದ್ದಂತೆ ಮುಚ್ಚಿದ್ದರಿಂದ ಏನು ಆಯಿತು ಎಂದು ಪರಿಶೀಲನೆ ನಡೆಸಲು ಕ್ಯಾಬಿನ್ ನಿಂದ ಹೊರಬಂದಿರುವ ಚಾಲಕ ಎಲ್ ಪಿ ಕಮಲೇಶ್ ರೈ , ರೈಲ್ವೆ ಹಳಿ ಪಕ್ಕದಲ್ಲಿರುವ ತುರ್ತ ದಾರಿಯಲ್ಲಿ ರಾಜಾಜಿನಗರ ಮೆಟ್ರೋ ನಿಲ್ದಾಣಕ್ಕೆ ಬಂದು ಘಟನೆಯನ್ನು ಕಂಟ್ರೋಲ್ ರೂಂಗೆ ತಿಳಿಸಿದ್ದಾರೆ.
ನಂತರ ನಕಲಿ ಕೀಯೊಂದಿಗೆ ದೌಡಾಯಿಸಿದ ನಿಲ್ದಾಣದ ನಿಯಂತ್ರಕರು ಮುಚ್ಚಿರುವ ಬಾಗಿಲುಗಳನ್ನು ತೆರೆದು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ . ಇದರಿಂದಾಗಿ ರೈಲು ಸಂಚಾರದಲ್ಲಿ 16 ನಿಮಿಷ ವ್ಯತ್ಯಯವಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement