ಬೆಂಗಳೂರು: ಶತಮಾನದ ಮಹಾ ಮಳೆಗೆ ತತ್ತರಿಸಿರುವ ಕೊಡಗು ಜಿಲ್ಲೆಯ ಏಳು ಮಂದಿ ಸೇರಿದಂತೆ ರಾಜ್ಯದಲ್ಲಿ ಕಳೆದ ಐದು ತಿಂಗಳಲ್ಲಿ ಮುಂಗಾರು ಮಳೆಯಿಂದಾಗಿ 152 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ರಾಜ್ಯದಲ್ಲಿ ಏಪ್ರಿಲ್ನಿಂದ ಈವರೆಗೆ ಒಟ್ಟು 155 ಮಂದಿ ಮೃತಪಟ್ಟಿದ್ದು, ಈ ಪೈಕಿ ಬಳ್ಳಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು(ತಲಾ 11) ಸಾವು ಸಂಭವಿಸಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಆರು ಮಂದಿ ಮೃತಪಟ್ಟಿದ್ದು, ಸಿಡಿಲು ಬಡಿದು ಅತಿ ಹೆಚ್ಚು ಸಾವು ಸಂಭವಿಸಿವೆ ಎಂದು ಅವರು ಹೇಳಿದ್ದಾರೆ.
ಸಿಡಿಲು ಬಡಿದು 103 ಮಂದಿ, ಮರ ಬಿದ್ದು ಅಥವಾ ಮನೆ ಕುಸಿತ ಸೇರಿದಂತೆ ಇತರೆ ಮಳೆ ಸಂಬಂಧಿ ಘಟನೆಯಲ್ಲಿ 37 ಮಂದಿ ಮೃತಪಟ್ಟಿದ್ದಾರೆ.
ಮಳೆಯಿಂದಾಗಿ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಆಸ್ತಿ ಹಾನಿಯಾಗಿದ್ದು, ಒಟ್ಟು 1550 ಮನೆಗಳಿಗೆ ಹಾನಿಯಾಗಿದೆ. ಕೊಪ್ಪಳದಲ್ಲಿ 1239, ಬೆಳಗಾವಿಯಲ್ಲಿ 1245, ರಾಯಚೂರಿನಲ್ಲಿ 1121 ಹಾಗೂ ಕೊಡಗಿನಲ್ಲಿ ಇದುವರೆಗೆ 845 ಮನೆಗಳಿಗೆ ಹಾನಿಯಾಗಿದೆ.