50,000 ಜನರ ಮೇಲೆ ಮಳೆಯಿಂದ ಗಂಭೀರ ಪರಿಣಾಮ: ಸಿಎಂಗೆ ಉಪ ಆಯುಕ್ತರಿಂದ ವರದಿ

ಮಳೆಯ ಆರ್ಭಟದಿಂದಾಗಿ ಪ್ರವಾಹ ಎದುರಾಗಿ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯಲ್ಲಿ ಭಾನುವಾರ ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಉಪ ಆಯುಕ್ತೆ ಶ್ರೀವಿದ್ಯಾ ಪಿಐ ಅವರು ನಷ್ಟಗಳ ಕುರಿತಂತೆ ವರದಿ ಸಲ್ಲಿಸಿದ್ದಾರೆ...
ಕೊಡಗು ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸುತ್ತಿರುವ ಸಿಎಂ ಕುಮಾರಸ್ವಾಮಿ
ಕೊಡಗು ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸುತ್ತಿರುವ ಸಿಎಂ ಕುಮಾರಸ್ವಾಮಿ
ಮಡಿಕೇರಿ: ಮಳೆಯ ಆರ್ಭಟದಿಂದಾಗಿ ಪ್ರವಾಹ ಎದುರಾಗಿ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯಲ್ಲಿ ಭಾನುವಾರ ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಉಪ ಆಯುಕ್ತೆ ಶ್ರೀವಿದ್ಯಾ ಪಿಐ ಅವರು ನಷ್ಟಗಳ ಕುರಿತಂತೆ ವರದಿ ಸಲ್ಲಿಸಿದ್ದಾರೆ. 
ಪ್ರಸಕ್ತ ವರ್ಷದಲ್ಲಿ ಕೊಡಗು ಜಿಲ್ಲೆಯಲ್ಲಿ ಶೇ.73ರಷ್ಟು ಮಳೆಯಾಗಿದ್ದು, 50,000ಕ್ಕೂ ಹೆಚ್ಚು ಜನರ ಮೇಲೆ ಗಂಭೀರ ಪರಿಣಾಮ ಬೀರಿದೆ. 4,000ಕ್ಕೂ ಅಧಿಕ ಜನರು ಸಂಕಷ್ಟದಲ್ಲಿದ್ದು, ಎಲ್ಲಾ ರೀತಿಯ ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ಕಳೆದ 5 ದಿನಗಳಿಂದ ಹವಾಮಾನ ವಾತಾವರಣ ಸಂಪೂರ್ಣವಾಗಿ ಕೆಟ್ಟದಾಗಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಮನೆಗಳ ಕುಸಿತ ಹಾಗೂ ಭೂಕುಸಿತಗಳು ಸಂಭವಿಸಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. 
ವರದಿ ಪಡೆದ ಬಳಿಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವ ಕುಮಾರಸ್ವಾಮಿಯವರು ಜನರಿ ಭೂಮಿಗಳನ್ನು ಗುರ್ತಿಸಿ, ಅವರಿಗೆ ವಾಸಸ್ಥಾನಕ್ಕೆ ಮನೆಗಳನ್ನು ನಿರ್ಮಾಣ ಮಾಡುವುದು ಹಾಗೂ ರಸ್ತೆಗಳ ನಿರ್ಮಾಣ ಕಾರ್ಯಗಳನ್ನು ಕೂಡಲೇ ಆರಂಭಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ಜನರು ಉಳಿದುಕೊಳ್ಳಲು ತಾತ್ಕಾಲಿಕ ನಿರಾಶ್ರಿತ ಕೇಂದ್ರಗಳನ್ನು ನಿರ್ಮಿಸುವಂತೆಯೂ ತಿಳಿಸಿದ್ದಾರೆ. 
ನೆರವು ಕಾರ್ಯಗಳಿಗೆ ಜಿಲ್ಲಾ ಆಡಳಿತಾಧಿಕಾರಿಗಳು ನಿರ್ಧಾರ ಕೈಗೊಳ್ಳಲು ಇದೇ ವೇಳೆ ಕುಮಾರಸ್ವಾಮಿಯವರು ಮುಕ್ತ ಹಸ್ತ ನೀಡಿದ್ದಾರೆ. 
ಬೆಂಗಳೂರಿನಿಂದ 120ಕ್ಕೂ ಹೆಚ್ಚು ಪೋರ್ಟಬಲ್ ಶೌಚಾಲಯಗಳನ್ನು ನೆರವು ಕೇಂದ್ರಗಳಿಗೆ ಬೆಂಗಳೂರಿನಿಂದ ಸ್ಥಳಾಂತರ ಮಾಡಲಾಗಿದೆ. 
300 ಬಿಬಿಎಂಪಿ ಪೌರಕಾರ್ಮಿಕರನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ನಿಯೋಜನೆ ಮಾಡಲಾಗಿದೆ. ಮೈಸೂರು ನಗರ ಪಾಲಿಕೆಯ 27 ಸದಸ್ಯರ ತಂಡವನ್ನು ಕೊಡಗು ಜಿಲ್ಲೆಗೆ ರವಾನಿಸಲಾಗಿದೆ. ಕುಶಾಲನಗರಲ್ಲಿ ಪ್ರವಾಹ ಮಟ್ಟ ತಗ್ಗಿದ್ದು, ಸ್ವಚ್ಛತಾ ಕಾರ್ಯಗಳನ್ನು ನಡೆಸಬೇಕಿದೆ. ಸಾಂಕ್ರಾಮಿಕ ರೋಗ ತಡೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕುಮಾರಸ್ವಾಮಿಯವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com