ಬೆಂಗಳೂರು :ಕಳೆದ ವಾರ ನಾಪತ್ತೆಯಾಗಿದ್ದ ಕ್ಯಾಂಟರ್ ಚಾಲಕ ನವಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಹಂತಕ ಪಡೆಯನ್ನು ವರ್ತೂರು ಪೊಲೀಸರು ಬಂಧಿಸಿದ್ದಾರೆ.
ನವಾಜ್ ಪತ್ನಿ ಅಯೇಷಾಳನ್ನು ಪಡೆಯುವ ಸಲುವಾಗಿ ಆತನನ್ನು ಹತ್ಯೆ ಮಾಡಿರುವುದಾಗಿ ಪ್ರಮುಖ ಆರೋಪಿ ಶಿವಕುಮಾರ್ ಹೇಳಿಕೆ ನೀಡಿದ್ದಾನೆ.
ಸರಕು ಸಾಗಣೆ ನೆಪದಲ್ಲಿ ನವಾಜ್ ಕ್ಯಾಂಟರ್ ಬಾಡಿಗೆ ಪಡೆದುಕೊಂಡು ಚಿಕ್ಕಮಗಳೂರಿನ ಕುದುರೆ ಮುಖಕ್ಕೆ ಕರೆದುಕೊಂಡು ಹೋಗಿ ಆತನನ್ನು ಹತ್ಯೆ ಮಾಡಿ, ಮೃತ ದೇಹವನ್ನು ನದಿಗೆ ಎಸೆಯಲಾಗಿತ್ತು.
ಶಿವಕುಮಾರ್ (27) ರಕ್ಷಿತ್ ಆರ್ (19) ಕಾರ್ತಿಕ್ ( 23) ಪವನ್ ಎಸ್ ( 19) ಬಂಧಿತ ಆರೋಪಿಗಳು . ಇವರೆಲ್ಲೂ ವರ್ತೂರು ನಿವಾಸಿಗಳಾಗಿದ್ದು, ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.
ಅಯೇಷಾ ತನ್ನ ಮೊದಲ ಪತಿಯಿಂದ ಪ್ರತ್ಯೇಕಗೊಂಡ ಏಳು ವರ್ಷಗಳ ನಂತರ ಹತ್ಯೆಯಾದ ನವಾಜ್ ಆಕೆಯನ್ನು ವಿವಾಹವಾಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನವಾಜ್ ಕೂಡಾ ಮೊದಲ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ.
ಅಯೇಷಾಳೊಂದಿಗೆ ಅನೈತಿಕ ಸಂಪರ್ಕ ಹೊಂದಿದ್ದ ಕ್ಯಾಬ್ ಡ್ರೈವರ್ ಶಿವಕುಮಾರ್ ತನ್ನ ಗ್ಯಾಂಗ್ ನೊಂದಿಗೆ ನವಾಜ್ ನನ್ನು ಹತ್ಯೆ ಮಾಡಿದ್ದಾನೆ.
ಆಗಸ್ಟ್ 21 ರಂದು ಬೆಳಗ್ಗೆ ಪವನ್ ನವಾಜ್ ಗೆ ಪೋನ್ ಮಾಡಿದ್ದು, ವೈಲ್ಡ್ ಪೀಲ್ಡ್ ಗೆ ಕೆಲ ಸರಕು ಸಾಗಾಣಿಕೆ ಮಾಡುವಂತೆ ಕೇಳಿಕೊಂಡಿದ್ದಾನೆ. ನಂತರ ನವಾಜ್ ಅಲ್ಲಿಗೆ ಹೋಗಿದ್ದು, ಶಿವು ಮತ್ತಿತರರು ಆತನನ್ನು ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಿ ಚಾಕುವಿನಿಂದ ಪದೇ ಪದೇ ಇರಿದಿದ್ದಾರೆ. ನಂತರ ನದಿಯಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದರು. ನವಾಜ್ ಪೋಷಕರು ಅಯೇಷಾಳನ್ನು ಕೇಳಿದಾಗ ಆಕೆ ಆಗಸ್ಟ್ 23 ರಂದು ಪೊಲೀಸರಿಗೆ ದೂರು ನೀಡಿದ್ದಳು.
ಪೊಲೀಸರು ಅಯೇಷಾಳ ಪೋನ್ ಕಾಲ್ ರೆಕಾರ್ಡ್ ತೆಗೆದು ಪರಿಶೀಲನೆ ನಡೆಸಿದ್ದು, ಶಿವಕುಮಾರ್ ಬಂಧನದ ನಂತರವೂ ಆತನೊಂದಿಗೆ ಅಯೇಷಾ ಸತತ ಸಂಪರ್ಕದಲ್ಲಿರುವುದು ಕಂಡುಬಂದಿದೆ. ಹೆಚ್ಚಿನ ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ಆತ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಮಧ್ಯೆ ಹತ್ಯೆಯಲ್ಲಿ ಅಯೇಷಾ ಪಾತ್ರದ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
Advertisement