ಬೈಯಪ್ಪನಹಳ್ಳಿ ರೈಲ್ವೆ ಮೇಲ್ಸುತುವೆ ಕಾಮಗಾರಿ ಶೀಘ್ರದಲ್ಲಿಯೇ ಆರಂಭ
ಬೆಂಗಳೂರು : ಹಲವು ದಿನಗಳಿಂದ ನನೆಗುದಿಗೆ ಬಿದ್ದಿರುವ ಬೈಯಪ್ಪನಹಳ್ಳಿ ರೈಲ್ವೆ ಮೇಲ್ಸುತುವೆ ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗಲಿದೆ. ಭೂ ಸ್ವಾಧೀನ ಸಂಬಂಧ ರಕ್ಷಣಾ ಇಲಾಖೆ ಹಾಗೂ ರಾಜ್ಯಸರ್ಕಾರ ಶೀಘ್ರದಲ್ಲಿಯೇ ಸಹಿ ಹಾಕಲಿದ್ದು, ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತಿದೆ.
ಈ ಕಾಮಗಾರಿಯ ವಿಳಂಬದಿಂದಾಗಿ ನಿತ್ಯ ಸಾವಿರಾರು ಮೋಟಾರ್ ಬೈಕ್ ಸವಾರರು ರೈಲ್ವೆ ಗೇಟ್ ಮುಂಭಾಗ ಕಾಯ್ದುವಂತಾಗಿದೆ. ಬೈಯಪ್ಪನಹಳ್ಳಿಗೆ ಕೋಚ್ ಟರ್ಮಿನಲ್ ಬರುವಷ್ಟರಲ್ಲಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ನೈರುತ್ಯ ರೈಲ್ವೆ ಬೋರ್ಡ್ ಅಧ್ಯಕ್ಷ ಅಶ್ವಾನಿ ಲೊಹಾನಿ, ನೈರುತ್ಯ ರೈಲ್ವೆಗೆ ತಿಳಿಸಿದ್ದಾರೆ.
ಭೂ ಪರಿವರ್ತನೆಗಾಗಿ ರಕ್ಷಣಾ ಸಚಿವಾಲಯಕ್ಕೆ 9, 991 ಚದರ ಮೀಟರ್ ಭೂಮಿ ನೀಡಲು ರಾಜ್ಯಸರ್ಕಾರ ಒಪ್ಪಿಗೆ ನೀಡಿದೆ. ನಂತರ ರಾಜ್ಯಸರ್ಕಾರದ ವಶಕ್ಕೆ ನೀಡುವ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರೈಲ್ವೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
2011ರಲ್ಲಿ ಈ ಸೇತುವೆ ನಿರ್ಮಾಣಕ್ಕೆ ಘೋಷಣೆ ಹೊರಡಿಸಲಾಗಿತ್ತು. ರಾಜ್ಯಸರ್ಕಾರದ ಸಹಭಾಗಿತ್ವದಲ್ಲಿ ರೈಲ್ವೆ ಕಾಮಗಾರಿ ಆರಂಭಿಸಿತ್ತು, ಆದರೆ, ಭೂ ವಿವಾದಕ್ಕೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ ತಕರಾರು ತೆಗೆದ ಹಿನ್ನೆಲೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೆ ಹಾಗೆಯೇ ಉಳಿದಿದೆ. ಇದರಿಂದಾಗಿ ಶಾಲಾ ಮಕ್ಕಳು , ಸಾರ್ವಜನಿಕರು ಸೇರಿದಂತೆ ಹಲವರು ನಿತ್ಯ ತೀವ್ರ ತೊಂದರೆ ಎದುರಿಸುವಂತಾಗಿದೆ.
ಪ್ರತಿದಿನ 120 ರೈಲ್ವುಗಳು ಸಂಚರಿಸುತ್ತವೆ. ಎಷ್ಟು ಬಾರಿ ಮೋಟಾರ್ ಬೈಕ್ ಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂಬುದನ್ನು ನೀವೆ ಊಹಿಸಿಕೊಳ್ಳಿ ಎಂದು ರೈಲ್ವೆ ಕಾವಲುಗಾರ ಸಿದ್ದಲಿಂಗಪ್ಪ ಹೇಳುತ್ತಾರೆ.