ರಾಜ್ಯ
ಕೇಂದ್ರದ ಉಜ್ವಲ ಯೋಜನೆಗಿಂತ ರಾಜ್ಯದ ಅನಿಲ ಭಾಗ್ಯ ಉತ್ತಮ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕೇಂದ್ರದ ಆಡಳಿತಾರೂಢ ಎನ್ ಡಿಎ ಸರ್ಕಾರ ಜಾರಿಗೆ ತಂದಿರುವ ಉಜ್ವಲ ಯೋಜನೆಗಿಂತ ರಾಜ್ಯ ಸರ್ಕಾರದ ಅನಿಲ ಭಾಗ್ಯ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ...
ಬೆಂಗಳೂರು: ಕೇಂದ್ರದ ಆಡಳಿತಾರೂಢ ಎನ್ ಡಿಎ ಸರ್ಕಾರ ಜಾರಿಗೆ ತಂದಿರುವ ಉಜ್ವಲ ಯೋಜನೆಗಿಂತ ರಾಜ್ಯ ಸರ್ಕಾರದ ಅನಿಲ ಭಾಗ್ಯ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಆರಂಭಿಸಿರುವ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿರವ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಜ್ವಯ ಯೋಜನೆ ಕೇವಲ ಕೆಲವೇ ಜನರಿಗೆ ತಲುಪಲಿದೆ. ಆದರೆ, ರಾಜ್ಯದ ಅನಿಲ ಭಾಗ್ಯ ಯೋಜನೆಯಿಂದ 30 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ರಾಜ್ಯದ 10 ಲಕ್ಷ ಜನರಿಗೆ ಕೇವಲ ಸಂಪರ್ಕ ಕಲ್ಪಿಸುತ್ತಿರುವುದಕ್ಕೆ ಬಿಜೆಯವರು ದೊಡ್ಡ ದೊಡ್ಡ ಬೋರ್ಡ್ ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರವು, ಸ್ವವ್, ಸಿಲಿಂಡರ್, ಲೈಟರ್ ಸಹ ನೀಡುತ್ತಿದೆ. ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ 30 ಲಕ್ಷ ಜನರು ಪ್ರಯೋಜನ ಪಡೆಯಲಿದ್ದಾರೆ. ಉಜ್ವಲ ಯೋಜನೆಯಡಿ ಪ್ರತಿ ಕನೆಕ್ಷನ್'ಗೆ ಕೇಂದ್ರ ಸರ್ಕಾರ ರೂ.1600 ಖರ್ಚು ಮಾಡಿದರೆ, ರಾಜ್ಯ ಸರ್ಕಾರ ರೂ.4,254 ಖರ್ಚು ಮಾಡುತ್ತಿದೆ ಎಂದು ಅಂಕಿ ಅಂಶ ವಿವರಿಸಿದರು.
ದೊಡ್ಡಸ್ಥಿಕೆಯಿಂದ ನಾನು ಈ ಮಾತನ್ನು ಹೇಳುತ್ತಿಲ್ಲ. ರಾಜ್ಯ ಸರ್ಕಾರವು ಜನರಿಗೆ ಉಪಯೋಗವಾಗುವ ಯೋಜನೆಗಳನ್ನು ಘೋಷಿಸಿರುವುದರಿಂದ ರಾಜ್ಯ 6.5 ಕೋಟಿ ಜನರ ಪೈಕಿ ಶೇ.90ರಷ್ಟು ಜನರು ಒಂದಲ್ಲಾ ಒಂದು ಯೋಜನೆಯ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಬಡವರಿಗೆ ಯೋಜನೆಗಳು ತಲುಪಿವೆ ಎಂದು ತಿಳಿಸಿದರು.