ಚಾಮರಾಜನಗರ: ಇದುವರೆಗೆ ಒಟ್ಟು 10 ಬಾರಿ ಚಾಮರಾಜನಗರಕ್ಕೆ ಸಿದ್ದರಾಮಯ್ಯ ಭೇಟಿಕೊಟ್ಟಿದ್ದು ಜಿಲ್ಲೆಗೆ ತಟ್ಟಿದ್ದ ಶಾಪ ವಿಮೋಚನೆಯಾಗಿದೆಯೆ? ಚಾಮರಾಜನಗರಕ್ಕೆ ಭೇಟಿ ಕೊಟ್ಟ ಮುಖ್ಯಮಂತ್ರಿಗಳು, ಉನ್ನತ ಅಧಿಕಾರಿಗಳು ಆರು ತಿಂಗಳಿನಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆನ್ನುವ ನಂಬಿಕೆ ಬಹು ಹಿಂದಿನ ಕಾಲದಿಂದಲೂ ಇದೆ. ಸಮಾಜವಾದಿ ತತ್ವಪಾಲಕರಾಗಿದ್ದ ಜೆ.ಎಚ್. ಪಟೇಲ್ ಆದಿಯಾಗಿ ಬಹುತೇಕ ಮುಖ್ಯಮಂತ್ರಿಗಳು ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡುವುದನ್ನು ತಪ್ಪಿಸಿದ್ದದ್ದು ಇದೇ ಕಾರಣಕ್ಕಾಗಿತ್ತು. ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಚಾಮರಾಜನಗರ ಜಿಲ್ಲೆ ರಚನೆ ಮಾಡಿದಾಗ ಸಹ ಕೊಳ್ಳೆಗಾಲದ ಮಲೆ ಮಾದೇಶ್ವರ ಬೆಟ್ಟ್ದದಿಂದಲೇ ಜಿಲ್ಲೆಯ ಉದ್ಘಾಟನೆ ನೆರವೇರಿಸಿದ್ದು ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಇನ್ನು ಎಚ್.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯ ಕಡೆ ದಿನಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು.ಕಾಕತಾಳೀಯ ವೆನ್ನುವಂತೆ ಅವರು ಮತ್ತೆ ಅಧಿಕಾರದಲ್ಲಿ ಮುಂದುವರಿಯಲಿಲ್ಲ.