ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಹದಾಯಿ ವಿವಾದ: ಬೆಳಗಾವಿ ಬಸ್ ಸಂಚಾರ ಸ್ಥಗಿತಗೊಳಿಸಿದ ಗೋವಾ ಸರ್ಕಾರ

ಮಹದಾಯಿ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಗೋವಾ ಸರ್ಕಾರ ಬೆಳಗಾವಿಗೆ ಆಗಮಿಸಬೇಕಿದ್ದ ಬಸ್'ಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ...
ಬೆಳಗಾವಿ: ಮಹದಾಯಿ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಗೋವಾ ಸರ್ಕಾರ ಬೆಳಗಾವಿಗೆ ಆಗಮಿಸಬೇಕಿದ್ದ ಬಸ್'ಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ. 
ಬೆಳಗಾವಿಯ ಕಣಕುಂಬಿಯಲ್ಲಿ ಮಹದಾಯಿ ಯೋಜನೆ ಕಾಮಗಾರಿ ಪರಿಶೀಲನೆ ನಡೆಸುವ ಸಲುವಾಗಿ ಆಗಮಿಸಿದ್ದ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಅವರು, ಕನ್ನಡಿಗರು ಹರಾಮಿಗಳು. ಅವರು ಏನು ಬೇಕಾದರೂ ಮಾಡುತ್ತಾರೆ. ಮಹದಾಯಿ ವಿವಾದವನ್ನು ನ್ಯಾಯಾಧೀಕರಣದಲ್ಲಿ ಬಗೆಹರಿಸಿಕೊಳ್ಳುತ್ತೇವೆ. ಈ ಸಂಬಂಧ ದಾಖಲೆಗಳನ್ನು ನ್ಯಾಯಾಧೀಕರಣಕ್ಕೆ ಸಲ್ಲಿಸುತ್ತೇವೆಂದು ಹೇಳಿಕೆ ನೀಡಿದ್ದರು. 
ಗೋವಾ ಸಚಿವರ ಈ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶಗಳು ವ್ಯಕ್ತವಾಗತೊಡಗಿದವು. ರಾಜಕಾರಣಿಗಳು ಹಾಗೂ ಕನ್ನಡಪರ ಸಂಘಟನೆಗಳು ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತಿವೆ. 
ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗೋವಾ ಸರ್ಕಾರ ರಾಜ್ಯಕ್ಕೆ ಆಗಮಿಸಬೇಕಿದ್ದ ಬಸ್ ಸಂಚಾರಗಳನ್ನು ಅನಧಿಕೃತವಾಗಿ ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ. 
ಬಸ್ ಸಂಚಾರ ಸ್ಥಗಿತ ಹಿನ್ನಲೆಯಲ್ಲಿ ಮಾಹಿತಿ ನೀಡಿರುವ ಬೆಳಗಾವಿ ವಿಭಾಗೀಯ ನಿಯಂತ್ರಕ ಕಚೇರಿ, ಗೋವಾ ಸರ್ಕಾರದೊಂದಿಗೆ ಅಧಿಕೃತವಾಗಿ ಯಾವುದೇ ರೀತಿಯ ಮಾತುಕತೆಗಳು ನಡೆದಿಲ್ಲ. ಆದರೆ, ಬೆಳಗಾವಿಗೆ ಎಂದಿನಂತೆ ಬರುತ್ತಿದ್ದ ಬಸ್ ಗಳು ಸೋಮವಾರ ಬಂದಿಲ್ಲ. ಕರ್ನಾಟಕದ ಕಡೆಯಿಂದ ಯಾವುದೇ ಬೆದರಿಕೆಗಳು ಹಾಗೂ ಅಹಿತಕರ ಘಟನೆಗಳು ಇಲ್ಲದಿದ್ದರೂ ಬಸ್ ಸಂಚಾರ ಸ್ಥಗಿತಗೊಳಿಸಿರುವುದು ಆಶ್ಚರ್ಯವನ್ನು ತಂದಿದೆ ಎಂದು ತಿಳಿಸಿದೆ. 

Related Stories

No stories found.

Advertisement

X
Kannada Prabha
www.kannadaprabha.com