ರಾಜ್ಯ ಸರ್ಕಾರದ ಸಾಧನೆಗಳನ್ನು ಕೊಂಡಾಡಿದ ರಾಜ್ಯಪಾಲ ವಜುಭಾಯಿ ವಾಲಾ

ಬಂಡವಾಳ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ 2ನೇ ಬಾರಿಗೆ ಮೊದಲ ಸ್ಥಾನದಲ್ಲಿದೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಅವರು, ರಾಜ್ಯ ಸರ್ಕಾರದ ಸಾಧನೆಗಳನ್ನು ಶುಕ್ರವಾರ ಕೊಂಡಾಡಿದ್ದಾರೆ...
ರಾಜ್ಯಪಾಲ ವಜೂಭಾಯಿ ವಾಲಾ
ರಾಜ್ಯಪಾಲ ವಜೂಭಾಯಿ ವಾಲಾ
ಬೆಂಗಳೂರು: ಬಂಡವಾಳ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ 2ನೇ ಬಾರಿಗೆ ಮೊದಲ ಸ್ಥಾನದಲ್ಲಿದೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಅವರು, ರಾಜ್ಯ ಸರ್ಕಾರದ ಸಾಧನೆಗಳನ್ನು ಶುಕ್ರವಾರ ಕೊಂಡಾಡಿದ್ದಾರೆ. 
ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಿನ್ನೆ ನಡೆದ 69ನೇ ಗಣರಾಜ್ಯೋತ್ಸವದಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ರಾಜ್ಯ ಸರ್ಕಾರದ ಸಾಧನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಹಾಡಿ ಹೊಗಳಿದ್ದಾರೆ. 
ದೇಶದಲ್ಲಿ ರಾಜ್ಯ ಅತಿ ಹೆಚ್ಚು ಪ್ರಗತಿ ಹೊಂದಿದ ರಾಜ್ಯಗಳಲ್ಲಿ ಒಂದಾಗಿದೆ. ಮಹಿಳೆಯರ ಸಬಲೀಕರಣ ಮತ್ತು ಘನತೆ ರಕ್ಷಿಸುವುದಕ್ಕಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯ ದತ್ತ ಕೇಂದ್ರವನ್ನು ಸ್ಥಾಪಿಸಿದ್ದು, ಅದು ಸರ್ಕಾರದ ದಾಖಲೆಗಳನ್ನು ರಕ್ಷಿಸಿಡುವ ಖಜಾನೆಯಾಗಿದೆ ಎಂದು ಹೇಳಿದ್ದಾರೆ. 
ಐಟಿ ಮತ್ತು ಬಿಟಿ ವಲಯಗಳಲ್ಲಿ ರಾಜ್ಯ ಯಾವಾಗಲೂ ಮುಂಚೂಣಿಯಲ್ಲಿದೆ. ಐಟಿ ಉದ್ದಿಮೆಯ ದಕ್ಷತೆಯಿಂದಾಗಿ 2017ನೇ ಸಾಲಿನಲ್ಲಿ ರಾಜ್ಯವು ಐಟಿ ರಫ್ತು ಮೂಲಕ ದೇಶಕ್ಕೆ ರೂ.3 ಲಕ್ಷ ಕೋಟಿಗಳನ್ನು ಕೊಡುಗೆಯಾಗಿ ನೀಡಿದೆ. ಜೈವಿಕ ತಂತ್ರಜ್ಞಾನ ಉದ್ದಿಮೆಯ ಉದಾಯಕ್ಕೆ ಶೇ.35ರಷ್ಟು ಕೊಡುಗೆ ನೀಡಿದೆ. ರಾಜ್ಯ ಸರ್ಕಾರ ಸುಮಾರು 2147 ಕಿ.ಮೀ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುತ್ತಿದೆ ಎಂದು ತಿಳಿಸಿದ್ದಾರೆ. 
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿರುವ ಶಾಲೆಗಳಲ್ಲಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ  ಭಾಗಿಯಾಗಿದ್ದು, ಇದು ಕಾರ್ಯಕ್ರಮದ ರಂಗನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು. ಕಾರ್ಯಕ್ರಮ ಹಿನ್ನಲೆಯಲ್ಲಿ ಸ್ಥಳದಲ್ಲಿ ನಗರ ಪೊಲೀಸರು ಭಾರೀ ಭದ್ರತೆಯನ್ನು ಒದಗಿಸಿದ್ದರು. 
ಮೈದಾನದ ಸುತ್ತಮುತ್ತಲೂ ಮೊಬೈಲ್ ವ್ಯಾನ್ ಗಳನ್ನು ನಿಲ್ಲಿಸಲಾಗಿತ್ತು. ಮೊಬೈಲ್ ವ್ಯಾನ್ ಗಳ ಮೇಲೆ ಸರ್ಕಾರ ಸಾಧನೆಗಳ ಜಾಹೀರಾತುಗಳನ್ನು ಪ್ರದರ್ಶಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com