
ಬೆಂಗಳೂರು : ಫೆ. 4 ರಂದು ಪ್ರಧಾನಮಂತ್ರಿ ನರೇಂದ್ರಮೋದಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದು,ಅರಮನೆ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಆದರೆ, ಮಹದಾಯಿ ನದಿ ವಿವಾದ ಸಂಬಂಧ ಪ್ರಧಾನಿ ನರೇಂದ್ರಮೋದಿ ಗಮನ ಸೆಳೆಯಲು ಅಂದು ವಿವಿಧ ಕನ್ನಡ ಹಾಗೂ ರೈತ ಪರ ಸಂಘಟನೆಗಳು ಬೆಂಗಳೂರು ಬಂದ್ ಗೆ ಕರೆ ನೀಡಿವೆ. ಬಂದ್ ಹೊರತಾಗಿಯೂ ಪ್ರಧಾನಿ ಮೋದಿ ಭೇಟಿ ಯಶಸ್ವಿಗೊಳಿಸಲು ಬಿಜೆಪಿ ಸಿದ್ಧತೆ ನಡೆಸಿದೆ.
ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಯಿಂದ ಸುಮಾರು 3 ಲಕ್ಷ ಜನರು ಸೇರುವ ನಿರೀಕ್ಷೆಯಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ, ಎನ್, ರವಿಕುಮಾರ್, ಖಜಾಂಚಿ ಸುಬ್ಬಾ ನರಸಿಂಹ ಅವರನ್ನೊಳಗೊಂಡ 10 ಸದಸ್ಯರ ಸಮನ್ವಯ ಸಮಿತಿ ರಚಿಸಲಾಗಿದೆ
ರಾಜ್ಯರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳು ರಸ್ತೆಗಿಳಿಯುವ ಸಾಧ್ಯತೆ ಕಡಿಮೆ ಇದ್ದು, ಪಕ್ಷದ ಕಾರ್ಯಕರ್ತರನ್ನು ಕರೆತರಲು ಖಾಸಗಿ ಬಸ್ಸುಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ.ಸಮಾವೇಶಕ್ಕಾಗಿ ಆಗಮಿಸುವ ಜನರಿಗೆ ಉಚಿತ ಸಾರಿಗೆ, ಊಟದ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ವಕ್ತಾರ ಅಶ್ವತ್ ನಾರಾಯಣ್ ತಿಳಿಸಿದ್ದಾರೆ.
ಅಂದಿನ ಸಮಾವೇಶಕ್ಕೆ ಸಹಸ್ರಾರು ಜನರು ಆಗಮಿಸುವ ನಿರೀಕ್ಷೆಯಿದ್ದು, ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವ ಕನಕಪುರ, ನೆಲಮಂಗಲ, ಮತ್ತಿತರ ಕಡೆಗಳಲ್ಲಿ ಸಮುದಾಯ ಭವನ, ಶಾಲಾ, ಕಾಲೇಜುಗಳ ಬಳಿ ಸಮಾವೇಶಕ್ಕೂ ಮುನ್ನ ಸ್ವಲ್ಪ ಹೊತ್ತು ತಂಗಲು ವ್ಯವಸ್ಥೆ ಮಾಡಲಾಗಿದೆ.
ಬೃಹತ್ ಬೈಕ್, ಟಾರ್ಟ್ ಲೈಟ್ ಮೆರವಣಿಗೆ ಆಯೋಜಿಸಲಾಗಿದ್ದು, ಕೆಲ ದಿನಗಳ ಹಿಂದೆ ತಾಲೂಕು ಮಟ್ಟದಲ್ಲಿ ಈ ಸಂಬಂಧಿತ ಕರಪತ್ರವನ್ನು ಹಂಚಲಾಗಿದೆ . ಸಮಾವೇಶ ಯಶಸ್ವಿಗೊಳ್ಳಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣ ವಿಭಾಗ ಕೂಡಾ ಕಾರ್ಯನಿರ್ವಹಿಸುತ್ತಿದೆ ಎಂದು ಅಶ್ವತ್ ನಾರಾಯಣ್ ತಿಳಿಸಿದ್ದಾರೆ.
Advertisement