ಕಲಬುರಗಿ: ಜಿಲ್ಲೆಯ ಅಫ್ಜಲ್ ಪುರ ಪಟ್ಟಣದ ಹೊರವಲಯದಲ್ಲಿ 10 ವರ್ಷ ಬಾಲಕನ ಶವ ಪತ್ತೆಯಾಗಿದೆ.
ಬಾಲಕನ ಸೋದರಿಯನ್ನು ಪುಂಡರ ಗುಂಪೊಂದು ಚುಡಾಯಿಸುತ್ತಿದ್ದಾಗ ಪೋಷಕರಿಗೆ ಹೇಳುವುದಾಗಿ ಎಚ್ಚರಿಸಿದ್ದರಿಂದ ಕ್ರೋಧಗೊಂಡ ಗುಂಪಿನ ಸದಸ್ಯರು ತಮ್ಮ ಬಾಲಕನನ್ನು ಕೊಂದಿದ್ದಾರೆ ಎಂದು ತಾಯಿ ಅಫ್ಜಲ್ ಪುರ ಠಾಣೆಯಲ್ಲಿ ಪೊಲೀಸರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಶಶಿಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬಾಲಕ ರಾಜಶೇಖರ ಹೊನ್ನಾಳಿಯ ತಾಯಿ ವೈಶಾಲಿ ಅನಿಲ್ ಭಂಗಿ, ಸಂಜೀವ್ ಹೆಗ್ಗಿ, ಮಲ್ಲು ಇಂಗಲಗಿ, ಪಚ್ಚು ವಡೆಯರ್, ಮಲ್ಲು ಅಲಿಯಾಸ್ ಮಲ್ಲಿನಾಥ್ ಮತ್ತು ಬಸವರಾಜ್ ಕಂಡೊಲಿಯವರ ಹೆಸರನ್ನು ದೂರಿನಲ್ಲಿ ದಾಖಲಿಸಿದ್ದು ಅವರು ತನ್ನ ಮಗನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಅನಿಲ್ ಮತ್ತು ತನ್ನ ಕುಟುಂಬದವರ ಮಧ್ಯೆ ದ್ವೇಷವಿದ್ದು ಆತ ತನ್ನ ಮಗಳನ್ನು ಹೀಯಾಳಿಸುತ್ತಿದ್ದ ಎಂದು ದೂರಿದ್ದಾರೆ.
ಕಳೆದ ಶನಿವಾರ ಈ ರೀತಿ ಮಗಳನ್ನು ನಿಂದಿಸುತ್ತಿದ್ದಾಗ ಮಗ ರಾಜಶೇಖರ್ ಪೋಷಕರಿಗೆ ಹೇಳುತ್ತೇನೆ ಎಂದಿದ್ದಾನೆ. ಆಗ ಅನಿಲ್ ರಾಜಶೇಖರನ್ನು ಪುಸಲಾಯಿಸಿ ನಗರದ ಹೊರವಲಯಕ್ಕೆ ಕರೆದುಕೊಂಡು ಹೋಗಿ ತನ್ನ ಸ್ನೇಹಿತರನ್ನು ಬರಲು ಹೇಳಿ ಕುಡಗೋಲಿನಿಂದ ಕೊಂದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement