ಬೇರೆಯವರ ಜೀವ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ದುರ್ದೈವಿ: ನೈಸ್ ರಸ್ತೆಯಲ್ಲಿ ಅಪಘಾತ

ಇಬ್ಬರು ಅಪಘಾತಕ್ಕೀಡಾಗಿ ಅಪಾಯ ಎದುರಿಸುವುದರನ್ನು ತಡೆಯಲು ಹೋದ ಯುವಕನೇ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇಬ್ಬರು ಅಪಘಾತಕ್ಕೀಡಾಗಿ ಅಪಾಯ ಎದುರಿಸುವುದನ್ನು ತಡೆಯಲು ಹೋದ ಯುವಕನೇ ಅಪಘಾತದಲ್ಲಿ ಮೃತಪಟ್ಟ ಘಟನೆ ಬೆಂಗಳೂರಿನ ಕೆಂಗೇರಿ ಸಮೀಪ ನೈಸ್ ರಸ್ತೆಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು 29 ವರ್ಷದ ಬಿ ಎಸ್ ರಾಘವೇಂದ್ರ ಎಂದು ಗುರುತಿಸಲಾಗಿದೆ. ಮೊನ್ನೆ ಸೋಮವಾರ ನಸುಕಿನ ಜಾವ ಈ ದುರ್ಘಟನೆ ನಡೆದಿದ್ದು ಪೊಲೀಸರು ಸಾವಿಗೆ ಕಾರಣವಾದ ವಾಹನದ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.

ಚನ್ನಪಟ್ಟಣ ಮೂಲದ ರಾಘವೇಂದ್ರ ಪತ್ನಿ ತನುಜಾ ಮತ್ತು ಇಬ್ಬರು ಮಕ್ಕಳಾದ ನಯನ್ ಮತ್ತು ನಿಖಿತಾ ಅವರನ್ನು ಅಗಲಿದ್ದಾರೆ.

ಮೊನ್ನೆ ಸೋಮವಾರ ನಸುಕಿನ ಜಾವ 2.20ರ ಸುಮಾರಿಗೆ ರಾಘವೇಂದ್ರ ತಮ್ಮ ಟ್ರಕ್ ನಲ್ಲಿ ಕನಕಪುರ ಕಡೆಗೆ ಹೋಗುತ್ತಿದ್ದರು. ದಾರಿಯಲ್ಲಿ ಹೋಗುತ್ತಿದ್ದಾಗ ಬೈಕ್ ನಲ್ಲಿದ್ದ ಇಬ್ಬರು ಯುವಕರು ಪರಪೇಟೆ ಎಂಬಲ್ಲಿ ಮೇಲ್ಸೇತುವೆಯಿಂದ ಕೆಳಗೆ ಬಿದ್ದವರನ್ನು ಗಮನಿಸಿದರು.

ಅವರು ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದಾಗ ರಾಘವೇಂದ್ರ ತಮ್ಮ ಟ್ರಕ್ ನ್ನು ರಸ್ತೆಬದಿ ನಿಲ್ಲಿಸಿ ವಾಹನದಿಂದ ಕೆಳಗೆ ಇಳಿದರು. ಆಗ ಹಿಂದಿನಿಂದ ವೇಗವಾಗಿ ಬರುತ್ತಿದ್ದ ವಾಹನ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಯಿತು. ಇದನ್ನು ಕಂಡ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಯುವಕರು ಕೂಡಲೇ ಕೂಗಿಕೊಂಡರೂ ವಾಹನ ಚಾಲಕ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದ. ಯುವಕರು ವಾಹನದ ನೋಂದಣಿ ಸಂಖ್ಯೆ ಗುರುತಿಸುವಲ್ಲಿ ವಿಫಲರಾದರು.

ಸ್ವಲ್ಪ ಹೊತ್ತಿನ ನಂತರ ನೈಸ್ ರಸ್ತೆ ಗಸ್ತು ಸಿಬ್ಬಂದಿಗೆ ಅಪಘಾತವಾಗಿರುವುದು ತಿಳಿದು ರಾಘವೇಂದ್ರ ಮತ್ತು ಯುವಕರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಕೂಡ ರಾಘವೇಂದ್ರ ಬದುಕುಳಿಯದೆ ಮೃತಪಟ್ಟರು. ಗಾಯಗೊಂಡವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗಿರೀಶ್ ಮತ್ತು ಅಭಿಷೇಕ್ ತಮ್ಮ ಹೊಸ ಬೈಕ್ ನಲ್ಲಿ ಸವಾರಿ ಮಾಡಲು ನೈಸ್ ರಸ್ತೆಗೆ ಹೊರಟಿದ್ದರು. ಇವರು ಜಯನಗರ ನಿವಾಸಿಗಳಾಗಿದ್ದಾರೆ. ಬೈಕ್ ನ್ನು ವೇಗವಾಗಿ ಚಲಾಯಿಸಿದ ಕಾರಣ ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯಿಂದ ಕೆಳಗೆ ಬಿದ್ದಿದ್ದರು ಎಂದು ಪೊಲೀಸರು ಹೇಳುತ್ತಾರೆ. ಗಿರೀಶ್ ಬೈಕ್ ಚಲಾಯಿಸುತ್ತಿದ್ದರು.

ಈ ಮಧ್ಯೆ ಲಾರಿ ರಾಘವೇಂದ್ರಗೆ ಡಿಕ್ಕಿ ಹೊಡೆದು ಮೇಲ್ಸೇತುವೆಯ ಗೋಡೆಗೆ ಸಹ ಹೊಡೆದಿತ್ತು ಎಂದು ಯುವಕರು ಹೇಳಿಕೆ ನೀಡಿದ್ದಾರೆ. ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿರುವ ವಿಡಿಯೊವನ್ನು ನಾವು ಪರಿಶೀಲಿಸುತ್ತಿದ್ದು ಸದ್ಯದಲ್ಲಿಯೇ ಚಾಲಕನನ್ನು ಮತ್ತು ವಾಹನವನ್ನು ಪತ್ತೆಹಚ್ಚಲಾಗುವುದು ಎಂದು ಕೆಂಗೇರಿ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com