ರಾಜ್ಯದಲ್ಲಿ ಏಪ್ರಿಲ್ ನಿಂದ ಈವರೆಗೆ ಮಳೆ ದುರಂತಕ್ಕೆ ಮೃತಪಟ್ಟುವರು 104 ಮಂದಿ!

ಈ ವರ್ಷ ಏಪ್ರಿಲ್ 1ರಿಂದ ಜೂನ್ 10ರವರಗೆ ಮಳೆ ಸಂಬಂಧಿತ ಅವಘಡಗಳಿಂದ ರಾಜ್ಯದಲ್ಲಿ ...
ಚಿಕ್ಕಮಗಳೂರಿನ ಅಣ್ಣೂರಿನಲ್ಲಿ ಮಳೆಗೆ ಬುಡಸಮೇತ ಮುರಿದು ಬಿದ್ದ ಮರ
ಚಿಕ್ಕಮಗಳೂರಿನ ಅಣ್ಣೂರಿನಲ್ಲಿ ಮಳೆಗೆ ಬುಡಸಮೇತ ಮುರಿದು ಬಿದ್ದ ಮರ

ಬೆಂಗಳೂರು:  ಈ ವರ್ಷ ಏಪ್ರಿಲ್ 1ರಿಂದ ಜೂನ್ 10ರವರಗೆ ಮಳೆ ಸಂಬಂಧಿತ ಅವಘಡಗಳಿಂದ ರಾಜ್ಯದಲ್ಲಿ ಸುಮಾರು 104 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 94 ಮಂದಿ ಸಿಡಿಲು ಬಡಿದು 10 ಮಂದಿ ನೀರಿನಲ್ಲಿ ಮುಳುಗಿ, ಮರ ಬಿದ್ದು ಮತ್ತು ಗೋಡೆ ಕುಸಿದು ಬಿದ್ದು ಮೃತಪಟ್ಟವರಾಗಿದ್ದಾರೆ. ಅತಿ ಹೆಚ್ಚು ಮಂದಿ ಉತ್ತರ ಕನ್ನಡ ಜಿಲ್ಲೆಯಲ್ಲಿ 10 ಮಂದಿ ಅಸುನೀಗಿದ್ದಾರೆ.

ಇನ್ನು ದಕ್ಷಿಣ ಕನ್ನಡ, ಬೆಳಗಾವಿ, ಬಳ್ಳಾರಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಹೆಚ್ಚು ಅವಘಡಗಳು ಉಂಟಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್ ವಿ ದೇಶಪಾಂಡೆ, ಮೃತಪಟ್ಟವರ ಕುಟುಂಬದವರಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಇದುವರೆಗೆ ಮನುಷ್ಯರ ಸಾವು, ಜಾನುವಾರುಗಳ ಸಾವು ಮತ್ತು ಮನೆ ಹಾನಿಗಳಿಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಒಟ್ಟು 8.63 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಒಟ್ಟು ಪರಿಹಾರಗಳ ಪೈಕಿ 4.16 ಕೋಟಿ ರೂಪಾಯಿಗಳನ್ನು ಜನರ ಸಾವಿಗೆ, ಮನೆ ಹಾನಿಗೆ 2.87 ಕೋಟಿ ರೂಪಾಯಿ ಮತ್ತು ಜಾನುವಾರುಗಳ ಸಾವಿಗೆ 1.6 ಕೋಟಿ ರೂಪಾಯಿ ಇದುವರೆಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಈ ವರ್ಷ ರಾಜ್ಯದಲ್ಲಿ ಹಾನಿಯಾಗಿರುವ 2,298 ಮನೆಗಳಲ್ಲಿ 608 ಮನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿವೆ. ಇಲ್ಲಿ ಇದುವರೆಗೆ ಸುಮಾರು 300 ಮಿಲಿ ಮೀಟರ್ ಮಳೆಯಾಗಿದೆ. ಕಳೆದ ತಿಂಗಳು ಒಂದೇ ದಿನ ಇಲ್ಲಿ ಇಷ್ಟು ಮಳೆಯಾಗಿದೆ. ಮೇ ಕೊನೆಯ ವಾರದಲ್ಲಿ ಬೆಳಗಾವಿಯಲ್ಲಿ 558 ಮನೆಗಳು ಹಾನಿಯಾಗಿದ್ದು, 265 ಮನೆಗಳು ಧಾರವಾಡದಲ್ಲಿ ಮತ್ತು ಉಡುಪಿ ಜಿಲ್ಲೆಯಲ್ಲಿ 240 ಮನೆಗಳು ನಾಶವಾಗಿವೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೂಕುಸಿತದಿಂದ ಆಗುವ ಪ್ರಾಣಹಾನಿಯನ್ನು ತಪ್ಪಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆದ್ದಾರಿಯನ್ನು ಅಗಲೀಕರಣಗೊಳಿಸಲಾಗುತ್ತಿದೆ. ಹೆಚ್ಚು ಮಳೆಗೆ ಒಳಗಾಗುವ ಪ್ರದೇಶಗಳಲ್ಲಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.

ಇಂದು ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com