ಕಗ್ಗದಾಸಪುರ ಕೆರೆಯಲ್ಲಿ ಎಸ್ ಟಿಎಫ್ ಅಳವಡಿಕೆಗೆ ಡಿಸಿಎಂ ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ
ಕಗ್ಗದಾಸಪುರ ಕೆರೆಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವ ಡಾ. ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.
ಬೆಂಗಳೂರು: ಕಗ್ಗದಾಸಪುರ ಕೆರೆಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವ ಡಾ. ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ.
ಅಧಿಕಾರಿಗಳೊಂದಿಗೆ ಕಗ್ಗದಾಸಪುರ ಕೆರೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒತ್ತುವರಿ ಹಾಗೂ ಮಾಲಿನ್ಯ ನಿಯಂತ್ರಿಸಿ ಕೆರೆ ಸಂರಕ್ಷಣೆಗೆ ಸರ್ಕಾರ ಆದ್ಯತೆ ನೀಡಲಿದೆ ಎಂದರು.
ತ್ಯಾಜ್ಯ ನೀರು ಕೆರೆಗೆ ಹರಿಯುವಿಕೆ ಹಾಗೂ ಒತ್ತುವರಿ ಕುರಿತಂತೆ ಸ್ಥಳೀಯ ನಿವಾಸಿಗಳು ಉಪಮುಖ್ಯಮಂತ್ರಿಗೆ ಮಾಹಿತಿ ನೀಡಿದರು. 2016 ಫೆಬ್ರವರಿ ತಿಂಗಳಲ್ಲಿ ಕೆರೆ ಬಿಬಿಎಂಪಿಯಿಂದ ಬಿಡಿಗೆ ಒಳಪಟ್ಟಿತ್ತು. ಆದರೆ, 2018 ಮಾರ್ಚ್ ವರೆಗೂ ಬಿಬಿಎಂಪಿ ಕೆರೆಯ ಬಗ್ಗೆ ಯಾವುದೇ ಮೇಲ್ವಿಚಾರಣೆ ನಡೆಸಿಲ್ಲ ಎಂದು ಕಗ್ಗದಾಸಪುರ ಕೆರೆ ಉಳಿಸಿ ವೇದಿಕೆ ಸದಸ್ಯ ಆನಂದ್ ವಾಸುದೇವ್ ಹೇಳಿದರು.
ಬೆಂಗಳೂರಿನ ಬಹುತೇಕ ಕೆರೆಗಳು ಒತ್ತುವರಿ ಹಾಗೂ ಕಟ್ಟಡಗಳ ನಿರ್ಮಾಣದಿಂದಾಗಿ ಮುಂಗಾರು ಮಳೆ ನೀರು ಸರಾಗವಾಗಿ ಹರಿಯದಂತಾಗಿದ್ದು, ತ್ಯಾಜ್ಯ ನೀರು ಹಾಗೂ ಒಳಚರಂಡಿ ನೀರು ಕೆರೆಗೆ ಹರಿಯದಂತೆ ತಡೆಗಟ್ಟಬೇಕು ಎಂದು ಪರಮೇಶ್ವರ್ ಅವರನ್ನು ವಾಸುದೇವ್ ಒತ್ತಾಯಿಸಿದರು.
ತ್ಯಾಜ್ಯ ನೀರು ಸಂಸ್ಕರಣಾ ಘಟಕ ಅಳವಡಿಕೆಗೆ ಸೂಕ್ತ ಸ್ಥಳ ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ ಪರಮೇಶ್ವರ್ ,ಇಂಹುದೇ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಇನ್ನಿತರ ದೊಡ್ಡ ಕೆರಗಳಲ್ಲಿ ಅಳವಡಿಸಲಾಗುವುದು, ಸಂಸ್ಕರಣೆಗೊಂಡ ನೀರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಮಾಡಲಾಗುವುದು ಎಂದು ಹೇಳಿದರು.