ಬೆಂಗಳೂರು: ಒಂದು ಸಿಗರೇಟ್ ಗಾಗಿ ಇಬ್ಬರ ಕೊಲೆ!

ಸಿಗರೇಟ್ ಗೆ ಪಾವತಿಸಬೇಕಾಗಿದ್ದ 15 ರು. ಜಗಳವು ಇಬ್ಬರು ಸೋದರರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿಗರೇಟ್ ಗೆ ಪಾವತಿಸಬೇಕಾಗಿದ್ದ 15 ರು. ಜಗಳವು ಇಬ್ಬರು ಸೋದರರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬುಧವಾರ ರಾತ್ರಿ ಬೆಂಗಳೂರಿನ ಕೆಜಿ ಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಅಮೀನ್(30)​ ಮತ್ತು ಮತೀನ್(32) ಮೃತ ಸಹೋದರರು. ಗೋವಿಂದಪುರ ಮುಖ್ಯ ರಸ್ತೆಯಲ್ಲಿನ ವೀರಣ್ಣಗುಡ್ಡೆ ನಿವಾಸಿಗಳಾದ ಈ ಸೋದರರು ಮೆಕಾನಿಕ್ ವೃತ್ತಿಯಲ್ಲಿದ್ದರು.
ಅಮೀನ್ ಬುಧವಾರ ಸಂಜೆ ಸುಮಾರು 7.30ಗಂಟೆಗೆ ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯಲ್ಲಿ ಸಿಗರೇಟ್ ತೆಗೆದುಕೊಂಡಿದ್ದ. ಆದರೆ, ಹಣ ಕೊಡದೆ ಹಿಂತಿರುಗುತ್ತಿದ್ದ ಅಮೀನ್ ಗೆ ಅಂಗಡಿ ಮಾಲೀಕ ಅಲಿ ಹಣ ಕೇಳಿದ್ದ. ನಂತರ ನ್ಹಣ ಪಾವತಿಸುವೆ ಎಂದ ಅಮೀನ್ ಗೆ ಅಂಗಡಿಯಾತ ಬಿಡದೆ ಈಗಲೇ ಕೊಡುವಂತೆ ಹೇಳಿದಾಗ ಅಮೀನ್ ಕೋಪಗೊಂಡು ನನ್ನನ್ನು ಹಣ ಕೇಳುವೆಯಾ? ಎಂದು ಬೈದದ್ದಲ್ಲದೆ ಆತನ ಮಏಲೆ ಹಲ್ಲೆ ನಡೆಸಿದ್ದಾನೆ.
ಇದರಿಂದ ಕುಪಿತನಾದ ಅಲಿ ತನ್ನ ಸ್ನೇಹಿತರಿಗೆ ಕರೆ ಮಾಡಿ ನಡೆದ ವಿಚಾರವನ್ನು ಹೇಳಿದ್ದಾನೆ. ತಕ್ಷಣ ಆಗಮಿಸಿದ ಒಂದು ಗುಂಪು ಅಮೀನ್ ಹಾಗೂ ಅದೇ ವೇಳೆಗೆ ಆಗಮಿಸಿದ್ದ ಆತನ ಸೋದರ ಮತೀನ್ ಮೇಲೆ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ  ಮತೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಅಮೀನ್​ ನಿಮಾನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಕೆ.ಜಿ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com