ಕಲಬುರಗಿ: ಹತ್ತು ವರ್ಷದೊಳಗಿನ ಮಕ್ಕಳನ್ನು ನಗರ ಮತ್ತು ಪಟ್ಟಣ ಭಾಗಗಳಲ್ಲಿ ಭಿಕ್ಷೆ ಬೇಡಲು ತೊಡಗಿಸುವ ದಂಧೆಯನ್ನು ಇತ್ತೀಚೆಗೆ ಕಲಬುರಗಿಯಲ್ಲಿ ಪೊಲೀಸರು ಭೇದಿಸಿದ್ದಾರೆ.
ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಇಬ್ಬರು ಮಕ್ಕಳನ್ನು ಪರೀಕ್ಷಿಸಿದ ವೈದ್ಯರಿಗೆ ಆಘಾತ ಉಂಟಾಯಿತು. ಅವರ ಕಿರು ನಾಲಿಗೆಯನ್ನು ಕತ್ತರಿಸಿದ್ದರಿಂದ ಆ ಮಕ್ಕಳಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಫರ್ಜಾನ್ ಮತ್ತು ಪೈಜಾನ್ ಎಂಬ ಮಕ್ಕಳಿಗೆ ಜಿಲ್ಲಾ ಸರ್ಕಾರಿ ಶಾಲೆಯಲ್ಲಿ ಅಪೌಷ್ಟಿಕತೆಗಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಿಕ್ಕ ವೆಂಕಟರಮಣಪ್ಪ ತಿಳಿಸಿದ್ದಾರೆ.
ಈ ದಂಧೆಯ ರೂವಾರಿಗಳಾದ ಉತ್ತರ ಪ್ರದೇಶದ ಮೂವರು ಮತ್ತು ಕಲಬುರಗಿಯ ಒಬ್ಬರು ಮಕ್ಕಳ ಕಿರುನಾಲಿಗೆ ಕತ್ತರಿಸಿ ಭಿಕ್ಷಾಟನೆಗೆ ಕಳುಹಿಸಿದ್ದಾರೆ. ಇದರಿಂದ ಮಕ್ಕಳಿಗೆ ಮಾತನಾಡಲು ಸಾಧ್ಯವಾಗದೆ ಜನರ ಅನುಕಂಪ ಗಿಟ್ಟಿಸಿ ಸುಲಭದಲ್ಲಿ ಹಣ ಸಂಪಾದಿಸುವ ಮಾರ್ಗವಿದು ಎಂದು ವೆಂಕಟರಮಣಪ್ಪ ಹೇಳುತ್ತಾರೆ.
ಈ ಮಕ್ಕಳು ಆಹಾರ ತಿನ್ನಲಾಗದೆ ಮತ್ತು ನೀರು ಕುಡಿಯಲು ಸಾಧ್ಯವಾಗದೆ ಅಪೌಷ್ಟಿಕತೆಯಿಂದ ಬಳಲಿ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ಅಭಿವೃದ್ಧಿ ಸಮಿತಿ ಸದಸ್ಯೆ ಸುಧಾ ಪಾಲಾ ತಿಳಿಸಿದ್ದಾರೆ.
ರಂಜಾನ್ ಮಾಸಾಚರಣೆ ಸಂದರ್ಭದಲ್ಲಿ ಮುಸಲ್ಮಾನರು ದಾನ ನೀಡುತ್ತಾರೆ ಎಂದು ಈ ರೀತಿ ಮಕ್ಕಳನ್ನು ಬೇಕೆಂದೇ ಒತ್ತಾಯಪೂರ್ವಕವಾಗಿ ಭಿಕ್ಷಾಟನೆಗೆ ಕಳುಹಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷರನ್ನು ಒಳಗೊಂಡ ತಂಡವನ್ನು ಮಕ್ಕಳ ಸಹಾಯವಾಣಿ ಡಾನ್ ಬೊಸ್ಕೊ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಭೇದಿಸಿವೆ.
20 ಹಾಗೂ 13 ವರ್ಷದ ಫರೀದ್ ಮತ್ತು ಜಿಶಾನ್ ಎಂಬುವವರು ವೀಲ್ ಚೇರ್ ನಲ್ಲಿ ಫರ್ಜಾನ್ ಮತ್ತು ಪಿಯಾಜನ್ ಎಂಬ ಮಕ್ಕಳನ್ನು ಮಲಗಿಸಿಕೊಂಡು ನಗರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು. ಮಕ್ಕಳ ರಕ್ಷಣೆ ಕಾರ್ಯಕರ್ತರು ರುಬಿ ಮತ್ತು ರಹಿಸಾ ಬೇಗಂ ಅವರನ್ನು ಮತ್ತು ಉತ್ತರ ಪ್ರದೇಶದ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸ್ಥಳೀಯ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಬಶೀರ್ ಆಲಂನನ್ನು ಕೂಡ ಪೊಲೀಸರು ಬಂಧಿಸಿ ರಾಘವೇಂದ್ರ ನಗರ ಪೊಲೀಸ್ ಠಾಣೆಗೆ ಹಾಜರುಪಡಿಸಿದರು.
Advertisement