ಚಿತ್ರದುರ್ಗ:ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದಾಗಿ ಉದ್ಯಮಿ, ನಟ ದೊಡ್ಡಣ್ಣ ಅಳಿಯ ಕೆ.ಸಿ.ವೀರೇಂದ್ರ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ಕೈಬಿಡಲಾಗಿದೆ.
ನೋಟು ಅಮಾನ್ಯ ನಂತರ 500 ಹಾಗೂ 1 ಸಾವಿರ ನೋಟುಗಳ ಅಕ್ರಮ ಸಂಗ್ರಹಣೆ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬಿಐ ಅಧಿಕಾರಿಗಳು ಚಳ್ಳಕೆರೆಯಲ್ಲಿರುವ ಕೆ.ಸಿ.ವೀರೇಂದ್ರ ಮನೆ ಮೇಲೆ 2016ರ ಡಿಸೆಂಬರ್ 10ರಂದು ದಾಳಿ ನಡೆಸಿದ್ದರು.
ಗೋವಾದಲ್ಲಿನ ಕ್ಯಾಸಿನೊ, ಹುಬ್ಬಳ್ಳಿಯ ಕಚೇರಿ ಸೇರಿದಂತೆ ಒಟ್ಟು 15 ಕಡೆ ದಾಳಿ ನಡೆದಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೆ.ಸಿ.ವೀರೇಂದ್ರ ವಿರುದ್ಧ ಸಿಬಿಐ ಪ್ರಕರಣ ದಾಖಲು ಮಾಡಿತ್ತು. ಈಗ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ 'ಬಿ' ರಿಪೋರ್ಟ್ ಸಲ್ಲಿಸಲಾಗಿದ್ದು, ಪ್ರಕವರಣವನ್ನು ನ್ಯಾಯಾಲಯ ಇತ್ಯರ್ಥಗೊಳಿಸಿದೆ.
ದಾಳಿ ಮಾಡಿದಾಗ 500 ಮತ್ತು 2000 ರೂ. ಮುಖಬೆಲೆಯ 90 ಲಕ್ಷ ನಗದು, 28 ಕೆಜಿ ಚಿನ್ನದ ಬಿಸ್ಕತ್, 4 ಕೆಜಿ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿತ್ತು. ಇದರ ಒಟ್ಟು ಮೌಲ್ಯ 5.76 ಕೋಟಿ ಎಂದು ಸಿಬಿಐ ಹೇಳಿತ್ತು. ಸಿಬಿಐ ದಾಳಿ ಬಳಿಕ ಕೆ.ಸಿ.ವೀರೇಂದ್ರ ಅವರನ್ನು ಬಂಧಿಸಲಾಗಿತ್ತು. 42 ದಿನಗಳ ಬಳಿಕ ಜಾಮೀನಿನ ಮೇಲೆ ಅವರನ್ನು ಬಿಡುಗಡೆಗೊಂಡಿದ್ದರು.
ಸಾಕ್ಷ್ಯಾಧಾರಗಳ ಕೊರತೆ ಸಾಕ್ಷ್ಯಾಧಾರಗಳ ಕೊರತೆ ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರವಿದೆ ಎಂಬ ಆರೋಪ ಪುಷ್ಟೀಕರಿಸುವ ದಾಖಲೆಗಳು ಇಲ್ಲ. ಆರೋಪಿ ದಾಖಲೆ ತಿದ್ದಿದ್ದಾರೆ ಅಥವ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ ಎಂಬುದಕ್ಕೂ ಪುರಾವೆ ಇಲ್ಲ ಎಂದು ಸಿಬಿಐ ಹೇಳಿದೆ.
ಕೆ.ಸಿ.ವೀರೇಂದ್ರ ಅವರ ಮನೆ ಮೇಲೆ ದಾಳಿ ನಡೆಸಿದಾಗ ವಶಪಡಿಸಿಕೊಂಡಿರುವ ದಾಖಲೆಗಳನ್ನು ಮರಳಿಸುವಂತೆ ಸಿಬಿಐ ಕೋರ್ಟ್ ಆದೇಶ ನೀಡಿದೆ ಎಂದು ಕೆ.ಸಿ.ವೀರೇಂದ್ರ ಅವರ ಪರ ವಕೀಲ ಎಚ್.ಎಸ್.ಚಂದ್ರಮೌಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
Advertisement