ಗೌರಿ ಲಂಕೇಶ್ ಹತ್ಯೆ ಪ್ರಕರಣ; ನವೀನ್ ಕುಮಾರ್ ವಿರುದ್ಧ ಎಸ್ಐಟಿ ಬಳಿ ಯಾವುದೇ ಸಾಕ್ಷ್ಯವಿಲ್ಲ; ಆರೋಪಿ ಪರ ವಕೀಲ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕೆ.ಟಿ.ನವೀನ್ ಕುಮಾರ್ ವಿರುದ್ಧ ಎಸ್ಐಟಿ ಬಳಿ ಯಾವುದೇ ರೀತಿಯ ಸಾಕ್ಷ್ಯಾಧಾರಗಳಿಲ್ಲ ಎಂದು ಆರೋಪಿ ಪರ ವಕೀಲ ನ್ಯಾಯಾಲಯಕ್ಕೆ ತಿಳಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು; ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕೆ.ಟಿ.ನವೀನ್ ಕುಮಾರ್ ವಿರುದ್ಧ ಎಸ್ಐಟಿ ಬಳಿ ಯಾವುದೇ ರೀತಿಯ ಸಾಕ್ಷ್ಯಾಧಾರಗಳಿಲ್ಲ ಎಂದು ಆರೋಪಿ ಪರ ವಕೀಲ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 
ಹತ್ಯೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ನವೀನ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿ ಕುರಿತಂತೆ ನಿನ್ನೆ ವಿಚಾರಣೆ ನಡೆಸಿದ 70ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಾದ ಮಂಡಿಸಿರುವ ಆರೋಪಿ ಪರ ವಕೀಲ ವೇದಮೂರ್ತಿಯವರು, ಎಸ್ಐಟಿ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಹಲವು ದೋಷಗಳಿವೆ. ಎಸ್ಐಟಿ ಬಳಿ ಹೇಳಿಕೆ ನೀಡಿರುವ ವ್ಯಕ್ತಿ ನವೀನ್ ಕುಮಾರ್'ಗೆ ರೂ.3,000 ಸಾವಿರಕ್ಕೆ ಬುಲೆಟ್ ಗಳನ್ನು ಮಾರಾಟ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಆದರೆ, ಸಾಕ್ಷ್ಯಾಧಾರಿಗಳು ನೀಡಿರುವ ಹೇಳಿಕೆ ಪ್ರಕಾರ ಬುಲೆಟ್ ಗಳನ್ನು ರೂ.20,000ಕ್ಕೆ ಮಾರಾಟ ಮಾಡಲಾಗಿದೆ ಎನ್ನಲಾಗಿದೆ.
ನವೀನ್ ಕುಮಾರ್ ನನ್ನು ಮಂಪರು ಪರೀಕ್ಷೆಗೊಳಪಡಿಸುವಂತೆ ಈ ಹಿಂದೆ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ಇದನ್ನು ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ನಮಗೆ ಮಾಹಿತಿ ನೀಡಿರಲಿಲ್ಲ. ಗುಜರಾತ್'ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನವೀನ್ ಕುಮಾರ್ ನನ್ನು ಮಂಪರು ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂಬುದು ತಿಳಿದುಬಂದಿತ್ತು. ಪರೀಕ್ಷೆಗೊಳಪಡಲು ನವೀನ್ ನಿರಾಕರಿಸಿದಾಗ ಆತನ ಜೊತೆಗೆ ತೆರಳಲು ಎಸ್ಐಟಿ ಸಿದ್ಧವಾಗಿತ್ತು. ಮತ್ತಷ್ಟು ಪರೀಕ್ಷೆಗಳಿಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರೂ.1.10 ಲಕ್ಷ ಪಾವತಿಸಿರುವ ಸಂಬಂಧ ಎಸ್ಐಟಿ ದಾಖಲೆಗಳನ್ನು ಒದಗಿಸಿಲ್ಲ. 
ಎಸ್ಐಟಿ ದಾಖಲು ಮಾಡಿಕೊಂಡಿರುವ ಮೊಬೈಲ್ ನಂಬರ್ ಕಾಲ್ ಡೀಟೆಲ್ಸ್ ಕೂಡ ನಮ್ಮ ಕಕ್ಷಿದಾರರಿಗೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದ್ದಾರೆ. 
ಈ ವೇಳೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿದ್ದರೂ ನ್ಯಾಯಾಲಯದ ಗಮನಕ್ಕೆ ಏಕೆ ತರಲಿಲ್ಲ ಎಂದು ಪ್ರಶ್ನಿಸಿದೆ. ಬಳಿಕ ಆರೋಪಿ ಮಂಪರೀಕ್ಷೆಗೊಳಪಡಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದೆ. 
ಈ ವೇಳೆ ಉತ್ತರಿಸಿರುವ ಆರೋಪಿ ಪರ ವಕೀಲರು, ನವೀನ್ ಕುಮಾರ್ ಜೊತೆಗೆ ಮಾತುಕತೆ ನಡೆಸಿದ ಬಳಿಕ ಈ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ವಾದ-ಪ್ರತಿವಾದಗಳ ಬಳಿ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com