ಬೆಂಗಳೂರು: ನಗರದ ಕಾಡುಗೋಡಿಯಲ್ಲಿ ಐದನೇ ಅಂತಸ್ತಿನಿಂದ ಜಿಗಿದು ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ಕೋಲಾರದ ಇನ್ಸ್ ಪೆಕ್ಟರ್ ಚಂದ್ರಪ್ಪ ಅವರ ಕೈವಾಡ ಇರುವುದಾಗಿ ಶಂಕಿಸಲಾಗಿದ್ದು ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನಗಳು ಮೂಡ ತೊಡಗಿವೆ.
ಕಾಡುಗೋಡಿಯ ಬೆಳ್ತೂರಿನಲ್ಲಿ ಬೆಳಗಿವ ಜಾವ ಈ ಘಟನೆ ನಡೆದಿದ್ದು ಯಾದಗಿರಿ ಮೂಲದ 55 ವರ್ಷದ ಸುಂದರಮ್ಮ ಹಾಗೂ 36 ವರ್ಷದ ಮೌನೇಶ್ ಮೃತ ದುರ್ದೈವಿಗಳು. ಈ ಇಬ್ಬರೂ ಕೂಡ ನಾಲ್ಕು ದಿನಗಳ ಹಿಂದಷ್ಟೇ ಈ ಅಪಾರ್ಟ್ ಮೆಂಟ್ ಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೌನೇಶ್ ಚಂದ್ರಪ್ಪ ಅವರ ಸಹೋದರಿಯನ್ನು ಪ್ರೀತಿಸುತ್ತಿದ್ದು ಆ ಯುವತಿ ಕೂಡಾ ಅದೇ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಳು. ಇವರಿಬ್ಬರು ಎರಡು ಮೂರು ಬಾರಿ ಮನೆ ಬಿಟ್ಟು ಹೋಗಿದ್ದರು. ಕಳೆದ ಕೆಲ ದಿನಗಳಿಂದ ಯುವತಿ ಕಾಣೆಯಾಗಿದ್ದು ಈ ಬಗ್ಗೆ ಯುವತಿ ಸಹೋದರ ಚಂದ್ರಪ್ಪ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ತಂಗಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು.
ತನ್ನ ತಂಗಿ ಮನೆ ಬಿಟ್ಟು ಹೋಗಿದ್ದರಿಂದ ಕೋಪಗೊಂಡಿದ್ದ ಯುವತಿಯ ಸಹೋದರ ಚಂದ್ರಪ್ಪ ಮೌನೇಶ್ ಹಾಗೂ ಸುನಂದಮ್ಮ ಅವರನ್ನು ತಂದು ತಾನು ವಾಸವಿದ್ದ ಬೆಳತೂರಿನ ಅಪಾರ್ಟ್ ಮೆಂಟ್ ಪ್ಲಾಟ್ ನಲ್ಲಿ ಕೂಡಿಹಾಕಿದ್ದ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.