ಬೆಂಗಳೂರು: ವೇತನ ಪರಿಷ್ಕರಣೆ, ಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಮ್ಮ ಮೆಟ್ರೋ ರೈಲು ನೌಕರರು ಇದೇ 22 ರಂದು ಮುಷ್ಕರಕ್ಕೆ ಕರೆ ನೀಡಿದ್ದು, ಪ್ರಾದೇಶಿಕ ಕಾರ್ಮಿಕ ಆಯುಕ್ತರ ಮೂಲಕ ಸಂಧಾನ ಮಾಡಿಸಲು ಬಿಎಂಆರ್ ಸಿಎಲ್ ಮುಂದಾಗಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ , ಕೈಗಾರಿಕಾ ವಿವಾದ ಕಾಯ್ದೆ ಪ್ರಕಾರ ಸಂಧಾನ ನಡೆಸುವಂತೆ ಪ್ರಾದೇಶಿಕ ಕಾರ್ಮಿಕ ಆಯುಕ್ತರಿಗೆ ಮನವಿ ಮಾಡಲಾಗಿದೆ. ಮಾರ್ಚ್ 15 ರಂದು ವಿಚಾರಣೆ ನಡೆಯಲಿದೆ. ಒಂದು ಬಾರಿ ವಿಚಾರಣೆ ಆರಂಭವಾದರೆ, ತೀರ್ಪು ಮುಗಿಯುವರೆಗೂ ಮುಷ್ಕರ ನಡೆಸುವಂತಿಲ್ಲ ಎಂದು ಹೇಳಿದ್ದಾರೆ.
ಈ ವಿಚಾರಣೆ ಕೆಲವೇ ದಿನಗಳಲ್ಲಿ ಮುಗಿಯಬಹುದು ಅಥವಾ ಒಂದು ತಿಂಗಳು ಹಿಡಿಯಬಹುದು ಎಲ್ಲಾವೂ ಕಾರ್ಮಿಕ ಆಯುಕ್ತರ ಮೇಲೆ ಅವಲಂಬಿಸಿದೆ. ಆ ಸಂದರ್ಭದಲ್ಲಿ ಮುಷ್ಕರ ನಡೆಸುವಂತಿಲ್ಲ ಎಂದು ವಕೀಲ ಅಶೋಕ್ ಹಾರನಹಳ್ಳಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆ ನೀಡುವುದು ಮೆಟ್ರೋ ರೈಲು ಕಾಯ್ದೆ ಪ್ರಕಾರ ಶಿಕ್ಷಾರ್ಹವಾಗುತ್ತದೆ ಎಂದು ಬಿಎಂಆರ್ ಸಿಎಲ್ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಮುಖ್ಯ ನಿರ್ದೇಶಕರು ಮೆಟ್ರೋ ನೌಕರರಿಗೆ ಎಚ್ಚರಿಕೆ ನೀಡಿದ್ದಾರೆ.
ಮೆಟ್ರೋ ನೌಕರರ ವಿರುದ್ಧ ಎಸ್ಮಾ ಮೇಲಿನ ತಡೆಯಾಜ್ಞೆ ತೆರವಿಗಾಗಿ ಬಿಎಂಆರ್ ಸಿಎಲ್ ಅರ್ಜಿ ಸಲ್ಲಿಸಿದೆ.ಈ ಮಧ್ಯೆ ಕಾರ್ಮಿಕರ ಮನವಿ ಬಗ್ಗೆ ಚರ್ಚಿಸಲು ಆಡಳಿತ ಮಂಡಳಿ ಸಿದ್ಧವಿರುವುದಾಗಿ ಕಾರ್ಯನಿರ್ವಾಹಕ ನಿರ್ದೇಶಕ ಎ. ಎಸ್. ಶಂಕರ್ ತಿಳಿಸಿದ್ದಾರೆ.
Advertisement