ಗಂಗಾವತಿ: ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತವಾಗಿ ಎತ್ತಿನ ಗಾಡಿ, ಟೋಲ್ ಗೇಟ್ ಗೆ ಬಸ್ ಡಿಕ್ಕಿಯಾದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿ ನಡೆದಿದೆ.
ಬಸ್ ಚಾಲಕ ನಾರಾಯಣಸ್ವಾಮಿಗೆ ಹೃದಯಾಘಾತ ಆದ ಕಾರಣ ಬಸ್ ನಿಯಂತ್ರಣ ತಪ್ಪಿ ಎತ್ತಿನ ಗಾಡಿಗೆ ಗುದ್ದಿದೆ. ಬಳಿಕ ಹತ್ತಿರದಲ್ಲಿದ್ದ ಟೋಲ್ ಗೇಟ್ ಗೆ ಡಿಕ್ಕಿಯಾಗಿ ನಿಂತಿದೆ.
ಘಟನೆಯಿಂದಾಗಿ ಚಾಲಕ ಹಾಗೂ ಎತ್ತಿನ ಗಾಡಿಯಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎತ್ತಿನ ಗಾಡಿಯಲ್ಲಿದ್ದವರನ್ನು ಜಂಗಮರಕಲ್ಗುಡಿ ಗ್ರಾಮದ ಸುರೇಶ್, ಯಮನೂರಪ್ಪ ಮತ್ತು ನರಸಪ್ಪ ಎಂದು ಗುರುತಿಸಲಾಗಿದೆ. ಅಪಘಾತಕ್ಕೀಡಾಗಿರುವ ಬಸ್ ತುಮಕೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿತ್ತು.